ಚೆನ್ನೈ: ತ್ರಿಭಾಷಾ ಡ್ರಾಮಾ ಸಿನೆಮಾ 'ಶಭಾಶ್ ಕುಂಡು'ನಲ್ಲಿ ನಟಿಸುತ್ತಿರುವ ತಮಿಳು ಸೂಪರ್ ಸ್ಟಾರ್ ಕಮಲ ಹಾಸನ್ ಅನಿವಾರ್ಯ ಕಾರಣಗಳಿಂದ ತಾವೇ ಸಿನೆಮಾ ನಿರ್ದೇಶಿಸಬೇಕಾಗಿ ಬಂದಿದೆ. ಈ ಸಿನೆಮಾದ ನಿರ್ದೇಶಕ ಟಿಕೆ ರಾಜೀವ್ ತ್ಯಾಗಿ ಖಾಯಿಲೆ ಬಿದ್ದಿದ್ದರಿಂದ ನಟ ಈಗ ಮತ್ತೆ ಆಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ.
"ನಮ್ಮ ನಿರ್ದೇಶಕ ತೀವ್ರವಾಗಿ ಖಾಯಿಲೆ ಬಿದ್ದಿದ್ದಾರೆ. ಲಾಸೇಂಜಲೀಸ್ ನಲ್ಲಿ ಚಿತ್ರೀಕರಣ ನಡೆಸುವಾಗ ನಾಲ್ಕನೇ ದಿನ ದುರದೃಷ್ಟಕರವಾಗಿ ನಿರ್ದೇಶಕರಿಗೆ ಅನಾರೋಗ್ಯ ಉಂಟಾಯಿತು. ಉತ್ತರ ಅಮೆರಿಕಾ ಮತ್ತು ಯೂರೋಪ್ ನಲ್ಲಿ ಪತ್ತೆಯಾಗುವ ವಿರಳ ರೋಗ ಲೈಮ್ ಸೋಂಕಿನಿಂದ ಅವರು ಬಳಲುತ್ತಿದ್ದಾರೆ. ಯೋಜನೆ ತಡವಾಗಬಾರದೆಂದು ಈಗ ನಾನೇ ನಿರ್ದೇಶನಕ್ಕೆ ಇಳಿದಿದ್ದೇನೆ" ಎಂದು ಹಾಸನ್ ತಿಳಿಸಿದ್ದಾರೆ.
ರಾಜೀವ್ ಅವರಿಗೆ ಅತ್ಯುತ್ತಮ ಚಿಕಿತ್ಸೆಯ ವ್ಯವಸ್ಥೆಯನ್ನು ಲಾಸೇಂಜಲೀಸ್ ನಲ್ಲಿ ಮಾಡಲಾಗಿದೆ ಎಂದಿರುವ ನಟ-ನಿರ್ದೇಶಕ "ಅವರನ್ನು ಅತ್ಯುತ್ತಮ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದೇವೆ ಮತ್ತು ೨೪/೭ ಅವರನ್ನು ವೀಕ್ಷಿಸುತ್ತಿದ್ದೇವೆ" ಎಂದಿದ್ದಾರೆ.
ಹಾಸನ್ ಅವರಿಗೆ ನಿರ್ದೇಶನ ಹೊಸದೇನಲ್ಲ. ಈ ಹಿಂದೆ 'ಹೇ ರಾಮ್', 'ಚಾಚಿ ೪೨೦', 'ವಿಶ್ವರೂಪಂ', 'ದಶಾವತಾರಂ' ಸಿನೆಮಾಗಳನ್ನು ನಿರ್ದೇಶಿಸಿದ್ದರು.
ರಾಜೀವ್ ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ ಎನ್ನುವ ಹಾಸನ್, ಈಗಾಗಲೇ ೨೫ ಸಿನೆಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ರಾಜೀವ್ ಇನ್ನೂ ೨೫ ಸಿನೆಮಾಗಳನ್ನು ನಿರ್ದೇಶಿಸಲಿದ್ದಾರೆ ಮತ್ತು ಅವುಗಳಲ್ಲಿ ಕನಿಷ್ಠ ೧೦ ಸಿನೆಮಾಗಳಲ್ಲಾದರೂ ನಾನು ನಟಿಸಲಿದ್ದೇನೆ ಎಂಬ ಭರವಸೆ ನೀಡುತ್ತಾರೆ. ಈ ಯೋಜನೆ ಜುಲೈ ಅಂತ್ಯಕ್ಕೆ ಮುಗಿಯಬೇಕಾಗಿದ್ದರಿಂದ ತಾವೇ ನಿರ್ದೇಶಿಸಬೇಕಾಗಿದೆ ಎಂದು ಕೂಡ ಅವರು ತಿಳಿಸುತ್ತಾರೆ.
ಈ ಸಿನೆಮಾದಲ್ಲಿ ಹಾಸನ್ ಅವರ ಹಿರಿಯ ಪುತ್ರಿ 'ಶೃತಿ ಹಾಸನ್' ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಸನ್ ಅವರ ಕಿರಿಯ ಪುತ್ರಿ ಅಕ್ಷರ ಈ ಸಿನೆಮಾದ ಸಹ ನಿರ್ದೇಶಕಿ. ಇಳಯರಾಜ ಸಂಗೀತ ನೀಡಿರುವ ಈ ಸಿನೆಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ.
Advertisement