ಮಧುರೈ: ತಮಿಳು ಸಿನೆಮಾ 'ಲಿಂಗಾ' ವಿರುದ್ಧದ ಪ್ರಕರಣದಲ್ಲಿ ಕೋರ್ಟ್ ಗೆ ಹಾಜರಾಗುವಂತೆ ಸೂಪರ್ಸ್ಟಾರ್ ರಜನಿಕಾಂತ್ ಅವರಿಗೆ ಹೆಚ್ಚುವರಿ ಜಿಲ್ಲ ಮುನ್ಸಿಫ್ ನ್ಯಾಯಾಲಯ ಆದೇಶಿಸಿದೆ.
'ಲಿಂಗಾ' ಸಿನೆಮಾದ ಸ್ಕ್ರಿಪ್ಟ್ ಕದ್ದಿರುವುದು ಎಂದು ಆರೋಪಿಸಿ ಮಧುರೈನ ಕೆ ಆರ್ ರವಿ ರಥಿನಂ ಎಂಬುವವರು ಮದ್ರಾಸ್ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯ ಹಿನ್ನಲೆಯಲ್ಲಿ ಕೋರ್ಟ್ ಈ ಆದೇಶ ನೀಡಿದೆ. ಡಿಸೆಂಬರ್ ೧೪ ರಂದು ಕೋರ್ಟ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರಿಗೆ ೫ ಕೋಟಿ ಡಿಡಿ ಮತ್ತು ೫ ಕೋಟಿ ಬ್ಯಾಂಕ್ ಧೃಢೀಕರಣವನ್ನು ಕೋರ್ಟ್ ಗೆ ಸಲ್ಲಿಸುವಂತೆ ಆದೇಶ ನೀಡಿತ್ತು.
ಸಿನೆಮಾ ಬಿಡುಗಡೆ ಮಾಡಲು ಈ ನಿಯಮಗಳಿಗೆ ಒಪ್ಪಿದ್ದ ನಿರ್ಮಾಪಕ ವೆಂಕಟೇಶ್, ನಂತರ ಈ ಆದೇಶದ ವಿರುದ್ಧ ಮಾರ್ಚ್ ೨೦೧೫ ರಂದು ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು. ಆಗ ಸುಪ್ರೀಂ ಕೋರ್ಟ್ ಒಂದು ಕೋಟಿ ಬ್ಯಾಂಕ್ ಧೃಢೀಕರಣ ನೀಡುವಂತೆ ಸೂಚಿಸಿತ್ತು ಹಾಗೂ ಮಧುರೈನ ಜಿಲ್ಲ ಮುನ್ಸಿಫ್ ಕೋರ್ಟ್ ಗೆ ಈ ಪ್ರಕರಣವನ್ನು ಆರು ತಿಂಗಳೊಳಗೆ ಇತ್ಯರ್ಥ ಮಾಡುವಂತೆ ಸೂಚಿಸಿತ್ತು.
ಆದರೆ ಮುನ್ಸಿಫ್ ಕೋರ್ಟ್ ಈ ಸಮಯವನ್ನು ಮೀರಿದ್ದರಿಂದ ಮತ್ತೆ ಹೈಕೋರ್ಟ್ ಗೆ ವೆಂಕಟೇಶ್ ಅರ್ಜಿ ಸಲ್ಲಿಸಿದ್ದರು. ಆಗ ಏಪ್ರಿಲ್ ೩೦ರೊಳಗೆ ಈ ಪ್ರಕರಣ ಇತ್ಯರ್ಥ ಮಾಡುವಂತೆ ಮಧುರೈ ಕೋರ್ಟ್ ಗೆ ಹೈಕೋರ್ಟ್ ಸೂಚಿಸಿತ್ತು. ಆದುದರಿಂದ ರಜನಿಕಾಂತ್ ಮತ್ತು ನಿರ್ದೇಶಕ ಕೆ ಎಸ್ ರವಿಕುಮಾರ್ ಸೇರಿದಂತೆ ಎರಡು ಪಕ್ಷಗಳ ಕಕ್ಷಿದಾರರು ಮಾರ್ಚ್ ೮ ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ.
Advertisement