ಬೆಂಗಳೂರು: ಕೆಲವೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದರು, ಭಾರಿ ಬೇಡಿಕೆಯೊಂದಿಗೆ ಪ್ರದರ್ಶನ ಕಾಣುತ್ತಿರುವ 'ತಿಥಿ' ಸಿನೆಮಾವನ್ನು ಮುಂಬೈ ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ ವೀಕ್ಷಿಸಿದ್ದ ಬಾಲಿವುಡ್ ಮಂದಿ ಸಿನೆಮಾದ ಗುಣಗಾನವನ್ನು ಮುಂದುವರೆಸಿದ್ದಾರೆ.
ಇತ್ತೀಚೆಗಷ್ಟೇ ಟ್ವೀಟ್ ಮಾಡಿರುವ ಬಾಲಿವುಡ್ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ 'ಗ್ಯಾಂಗ್ಸ್ ಆಫ್ ವಸೀಪುರ್' ಖ್ಯಾತಿಯ ಅನುರಾಗ್ ಕಶ್ಯಪ್ "ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಕರ್ನಾಟಕದ ಇತರ ಭಾಗದ ಜನ 'ತಿಥಿ' ತಪ್ಪದೆ ನೋಡಿ. ಇತ್ತೀಚಿಗೆ ನಾನು ನೋಡಿದ ಅದ್ಭುತ ಹಾಸ್ಯಮಯ ಚಿತ್ರಗಳಲ್ಲೊಂದು" ಎಂದು ಟ್ವೀಟ್ ಮಾಡಿರುವುದಲ್ಲದೆ "ನಾನು ಮೂರು ಬಾರಿ ನೋಡಿರುವ ಸಿನೆಮಾ 'ತಿಥಿ' ಇನ್ನೂ ಹಲವು ಸಾರ್ತಿ ನೋಡಬಲ್ಲೆ. ತಪ್ಪಿಸಕೊಳ್ಳಬೇಡಿ" ಎಂದು ಕೂಡ ಬರೆದಿದ್ದಾರೆ.
ಕಥೆಗಾರ ಈರೇಗೌಡ ಕೂಡ ಇದರ ಬಗ್ಗೆ ಸಂಭ್ರಮ ವ್ಯಕ್ತಪಡಿಸಿ "ಮುಂಬೈ ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ ಚಿತ್ರ ವೀಕ್ಷಿಸಿದ ನಂತರ ನೀತಾ ಅಂಬಾನಿಯವರ ಮನೆಗೆ ನಮಗೆ ಔತಣಕುಟಕ್ಕೆ ಕರೆ ಬಂದಾಗ ಬಹಳ ಸಂತಸವಾಗಿತ್ತು" ಎನ್ನುತ್ತಾರೆ. ಅಲ್ಲಿ ಎ ಆರ್ ರೆಹಮಾನ್, ಅನುರಾಗ್ ಕಶ್ಯಪ್, ರಸಲ್ ಪೂಕಟಿ, ರಾಣ ದಗ್ಗುಬಟ್ಟಿ ಮತ್ತು ಅಡೂರ್ ಗೋಪಾಲಕೃಷ್ಣ ಇವರನ್ನು ಭೇಟಿ ಮಾಡಲು ಸಾಧ್ಯವಾದದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ.
"ಭಾರತೀಯ ಸಿನೆಮಾ 'ತಿಥಿ' ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ತೀರ್ಪುಗಾರರ ಪ್ರಶಸ್ತಿ ಪಡೆದದ್ದಕ್ಕೆ ಅವರಿಗೆಲ್ಲ ಖುಷಿಯಾಗಿತ್ತು" ಎನ್ನುತ್ತಾರೆ ಈರೇಗೌಡ ಮತ್ತು ಅನುರಾಗ್ ಕಶ್ಯಪ್ ಅವರ ಟ್ವೀಟ್ ಅಚ್ಚರಿ ತಂದಿದೆ ಎನ್ನುವ ಅವರು ಗಡ್ಡಪ್ಪ ಕುರಿ ಕಾಯುವ ಸಮುದಾಯಕ್ಕೆ ತನ್ನ ಕಥೆಯನ್ನು ಹೇಳುವ ದೃಶ್ಯ ಅನುರಾಗ್ ಕಶ್ಯಪ್ ಅವರಿಗೆ ಹೆಚ್ಚು ಇಷ್ಟವಾಗಿತ್ತು ಎಂದು ಕೂಡ ತಿಳಿಸುತ್ತಾರೆ.
ಅಡೂರ್ ಸಿನೆಮಾ ನೋಡುವಾಗ ಅವರ ಪಕ್ಕದಲ್ಲೇ ಕೂತಿದ್ದರಂತೆ ನಿರ್ದೇಶಕ ರಾಮ್ ರೆಡ್ಡಿ "ಸಿನೆಮಾ ಪೂರ್ತಿ ಅವರು ನಗುತ್ತಲೇ ಇದ್ದರು" ಎನ್ನುತ್ತಾರೆ ರಾಮ್.
ಇನ್ನೂ ಹೆಚ್ಚಿನ ಬಾಲಿವುಡ್ ತಾರೆಯರು ಸಿನೆಮಾ ನೋಡುವ ಆಸಕ್ತಿ ತೋರಿರುವುದರಿಂದ ಮುಂಬೈನಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಾಗುವುದಂತೆ. "ಕಿರಣ್ ರಾವ್ ಅವರು ವಿಶೇಷ ಪ್ರದರ್ಶನಕ್ಕೆ ಕೋರಿದ್ದಾರೆ. ಇರ್ಫಾನ್ ಖಾನ್ ಮತ್ತು ಸಂಜಯ್ ಲೀಲಾ ಭನ್ಸಾಲಿ ಕೂಡ ಆಸಕ್ತಿ ತೋರಿದ್ದಾರೆ" ಎನ್ನುವ ರಾಮ್ ಶೀಘ್ರದಲ್ಲೇ ಚೆನ್ನೈ, ಹೈದರಾಬಾದ್ ಮತ್ತು ಮುಂಬೈ ನಲ್ಲಿ ಸಿನೆಮಾ ಬಿಡುಗಡೆಯ ತವಕದಲ್ಲಿದ್ದಾರೆ.
Advertisement