ಜಯರಾಜ್ ಅವರ ಮಗ ಎಂದು ಗುರುತಿಸಿಕೊಳ್ಳುವುದರ ಬಗ್ಗೆ ಹೆಮ್ಮೆಯಿದೆ ಎಂದಿರುವ ಅಜಿತ್ ಜಯರಾಜ್ ತನ್ನ ತಂದೆ ಸಿಟಿಯ ರಾಬಿನ್ ಹುಡ್ ಆಗಿದ್ದರು ಎಂದು ಹೇಳುತ್ತಾರೆ. ಜಯರಾಜ್ ಮೃತಪಟ್ಟಾಗ ಅಜಿತ್ ಜಯರಾಜ್ ಗೆ ಕೇವಲ 8 ವರ್ಷ. ನನ್ನ ತಂದೆ ಜಯರಾಜ್ ಬಗ್ಗೆ ಜನರಿಗೆ ತಿಳಿಯದ ಅನೇಕ ವಿಷಯಗಳಿವೆ, ಅವರಲ್ಲಿ ಒಳ್ಳೆಯ ಗುಣಗಳೂ ಇದ್ದವು. ನಮ್ಮ ಏರಿಯಾದ ಸ್ಲಂಗಳಲ್ಲಿ ಇಂದಿಗೂ ದೇವರ ಫೋಟೊ ಪಕ್ಕದಲ್ಲಿ ಜಯರಾಜ್ ಫೋಟೊ ಇಟ್ಟು ಪೂಜೆ ಮಾಡುತ್ತಾರೆ. ಅವರಿಗೆ ಬಹಳಷ್ಟು ಮಂದಿ ಅನುಯಾಯಿಗಳಿದ್ದರು. ನಮ್ಮ ತಾಯಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಲು ಪಟ್ಟಿರುವ ಶ್ರಮ ಸೇರಿದಂತೆ ಜಯರಾಜ್ ಜೀವನದ ಬಗೆಗಿನ ಎಲ್ಲದನ್ನೂ ಚಿತ್ರದಲ್ಲಿ ತೋರಿಸಲಾಗುವುದು ಎಂದು 'ಅಗಮ್ಯ' ಸಿನೆಮಾದ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಅಜಿತ್ ತಿಳಿಸಿದ್ದಾರೆ. 'ಆ ದಿನಗಳು' ಸಿನೆಮಾದಲ್ಲಿ ಅಜಿತ್ ಪಾತ್ರವೊಂದರಲ್ಲಿ ನಟಿಸಬೇಕಿತ್ತಂತೆ. ಆದರೆ ಆಗ ಅವರು ದೈಹಿಕವಾಗಿ ಇನ್ನು ಸಿದ್ಧಗೊಳ್ಳದೆ ಹೋದದ್ದರಿಂದ ಆ ಪಾತ್ರವನ್ನು ಚೇತನ್ ಪಡೆದುಕೊಂಡರಂತೆ. ಆದರೆ ಈಗ ತಮ್ಮ ತಂದೆಯ ಬಗೆಗಿನ ಚಿತ್ರವನ್ನು 'ಭಗತ್' ನಿರ್ದೇಶಿಸಲಿದ್ದಾರೆ ಎಂದು ಅಜಿತ್ ಹೇಳಿದ್ದಾರೆ.