ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕ್ಷಮೆಯಾಚಿಸುವಂತೆ ನಾನು ಕೇಳಿರಲಿಲ್ಲ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಸ್ಪಷ್ಟನೆ ನೀಡಿದ್ದಾರೆ.
ಪಾಕಿಸ್ತಾನ ನಟರು ನಟಿಸಿರುವ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸದಿರಲು ಸಿನಿಮಾ ಪ್ರದರ್ಶಕರ ಸಂಘ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು.
ಇದರಂತೆ ಏ ದಿಲ್ ಹೈ ಮುಷ್ಕಿಲ್ ಪ್ರದರ್ಶನಕ್ಕೆ ನಿಷೇಧ ಹೇರಲಾಗುತ್ತದೆ ಎಂಬುದರ ಕುರಿತಂತೆ ಟ್ವಿಟರ್ ನಲ್ಲಿ ಕಿಡಿಕಾರಿದ್ದ ಕಶ್ಯಪ್ ಅವರು, ಪಾಕಿಸ್ತಾನ ನಟರನ್ನು ಬಳಸಿ ಚಿತ್ರವನ್ನು ತಯಾರು ಮಾಡಿದ ಕಾರಣಕ್ಕೆ ಕಣ್ ಜೋಹರ್ ಕ್ಷಣೆಯಾಚಿಸಬೇಕೆಂದು ಆಗ್ರಹಿಸಲಾಗುತ್ತಿದೆ. ಹಾಗಾದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ಖಾಸಗಿ ಕಾರ್ಯಕ್ರಮವೊಂದಕ್ಕೆ ಪಾಕಿಸ್ತಾನಕ್ಕೆ ಹೋಗಿದ್ದರು. ಅವರೂ ಕೂಡ ಕ್ಷಮೆಯಾಚಿಸಬೇಕೆಂದು ಹೇಳಿದ್ದರು.
ಮೋದಿಯವರು ಕ್ಷಮೆಯಾಚಿಸುವಂತೆ ಹೇಳಿದ್ದ ಕಶ್ಯಪ್ ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ತಮ್ಮ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿರುವ ಅವರು, ನನ್ನ ಅಭಿಪ್ರಾಯದಿಂದ ಚಿತ್ರರಂಗದ ಕೆಲ ಸಹೋದ್ಯೋಗಿಗಳಿಗೆ ಸಮಸ್ಯೆಯಾಗುತ್ತಿದ್ದು, ಇದಕ್ಕಾಗಿ ನಾನು ಸ್ಪಷ್ಟನೆ ನೀಡುತ್ತಿದ್ದೇನೆ. ನನ್ನ ಟ್ವೀಟ್ ಬಗ್ಗೆಯೇ ನಾನೇ ಸ್ಪಷ್ಟನೆ ನೀಡುತ್ತಿರುವುದು ನಿಜಕ್ಕೂ ದುರಾದೃಷ್ಟಕರ ವಿಚಾರ.
ಸಿನಿಮಾ ರಂಗದ ಮೃದು ಸ್ವಭಾವದಿಂದ ನನಗೆ ಸಾಕಾಗಿದೆ. ಪ್ರತಿಕ್ರಿಯೆ ನೀಡದರೂ ನಮ್ಮನ್ನು ಗುರಿ ಮಾಡಲಾಗುತ್ತದೆ, ನೀಡದೆ ಇದ್ದರೂ ನಮ್ಮನ್ನು ಗುರಿ ಮಾಡಲಾಗುತ್ತದೆ. ಪ್ರತಿಕ್ರಿಯೆ ನೀಡದಿದ್ದರೆ, ಬಾಲಿವುಡ್ ಏಕೆ ಮೌನವಾಗಿದೆ ಎಂದು ಪ್ರಶ್ನಿಸುತ್ತಾರೆ. ಒಂದು ವೇಳೆ ಪ್ರತಿಕ್ರಿಯೆ ನೀಡಿದರೆ ನಮ್ಮನ್ನು ಶತ್ರುಗಳನ್ನಾಗಿ ಮಾಡಲಾಗುತ್ತದೆ.
ನನ್ನ ಟ್ವೀಟ್ ಅರ್ಥ ನಾನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕ್ಷಮೆಯಾಚಿಸಬೇಕೆಂದಲ್ಲ. ನಾನು ಮೋದಿಯವರು ಕ್ಷಮೆಯಾಚಿಸಬೇಕೆಂದು ಹೇಳಿಲ್ಲ. ಜನರ ತೀರ್ಪಿನಲ್ಲಿರುವ ಸತ್ಯವನ್ನು ಪ್ರಶ್ನಿಸಿದ್ದೆ ಅಷ್ಟೇ ಎಂದು ಹೇಳಿದ್ದಾರೆ.
Advertisement