ನವದೆಹಲಿ: ತೀವ್ರ ನಿರ್ಜಲೀಕರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನಟ ವಿನೋದ್ ಖನ್ನಾ ಅವರು ಚೇತರಿಸಿಕೊಳ್ಳುತ್ತಿದ್ದಾರೆಂದು ಆಸ್ಪತ್ರೆಯ ವೈದ್ಯರು ಭಾನುವಾರ ಹೇಳಿದ್ದಾರೆ.
ನಿರ್ಜಲೀಕರಣದಿಂದ ಬಳಲುತ್ತಿದ್ದ ವಿನೋದ್ ಖನ್ನಾ ಅವರು ಕೆಲ ದಿನಗಳ ಹಿಂದಷ್ಟೇ ಸರ್ ಹೆಚ್'ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಾಗಿದ್ದರು. ವಿನೋದ್ ಖನ್ನಾ ಆವರ ಆರೋಗ್ಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳ ಸುದ್ದಿಗಳು ಓಡಾಡುತ್ತಿತ್ತು.
ಖನ್ನಾ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿತ್ತು. ಈ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಇದರ ನಡುವೆಯೇ ವಿನೋದ್ ಖನ್ನಾ ನಿಧನ ಹೊಂದಿದ್ದಾರೆಂಬ ವದಂತಿ ಕೂಡ ಹರಿದಾಡಲು ಆರಂಭವಾಗಿದೆ. ಈ ವಿದಂತಿಯನ್ನು ನಂಬಿದ್ದ ಮೇಘಾಲಯ ಬಿಜೆಪಿ ನಾಯಕರು ಕೆಲ ನಿಮಿಷಗಳ ಕಾಲ ಮೌನಾಚರಣೆಯನ್ನು ನಡೆಸಿದ್ದರು.
ನಂತರ ಸ್ಪಷ್ಟನೆ ನೀಡಿದ್ದ ಬಿಜೆಪಿ, ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಕೇಳಿ ಪರಿಶೀಲನೆ ನಡೆಸದೆಯೇ ಮೌನಾಚರಣೆಯನ್ನು ನಡೆಸಿದ್ದೆವು. ಈ ಮೂಲಕ ನಾವು ಕ್ಷಮೆ ಕೋರುತ್ತಿದ್ದೇವೆ. ಪ್ರಸ್ತುತ ವಿನೋದ್ ಖನ್ನಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದು ಹೇಳಿದೆ.