ತಿರುನೆಲ್ವಲಿ: ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಟ ಕಮಲ್ ಹಾಸನ್ ಅವರಿಗೆ ಶುಕ್ರವಾರ ಕೋರ್ಟ್ ಸಮನ್ಸ್ ನೀಡಿದೆ.
ಮಹಾಭಾರತದ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 5ರಂದು ವಿಚಾರಣೆಗೆ ಹಾಜರಾಗುವಂತೆ ವಲ್ಲಿಯೂರ್ ನ್ಯಾಯಾಲಯ ಕಮಲ್ ಹಾಸನ್ ಅವರಿಗೆ ಇಂದು ಸಮನ್ಸ್ ಜಾರಿ ಮಾಡಿದೆ.
ಮಾರ್ಚ್ 12ರಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕಮಲ್ ಹಾಸನ್ ಅವರು, ಒಬ್ಬ ಮಹಿಳೆಯನ್ನು (ದ್ರೌಪದಿ) ಜೂಜಿಗೆ ಪಣವಾಗಿಟ್ಟ ಕತೆಯಿರುವ ಪುಸ್ತಕವನ್ನು ಈ ದೇಶ ಪೂಜನೀಯ ಎಂದು ಭಾವಿಸಿದೆ ಎಂಬರ್ಥದ ಹೇಳಿಕೆ ನೀಡಿದ್ದರು.
‘ಮಹಾಭಾರತದ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕಮಲ್ ಹಾಸನ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿ ಹಿಂದೂ ಮಕ್ಕಳ್ ಕಟ್ಚಿ ಸಂಘಟನೆಯು ಚೆನ್ನೈ ಪೊಲೀಸರಿಗೆ ದೂರು ನೀಡಿತ್ತು.