ರಾಜ್ಯವರ್ಧನ ಸಿಂಗ್ ರಾಥೋಡ್
ಸಿನಿಮಾ ಸುದ್ದಿ
ಚಿತ್ರ ನಿರ್ಮಾಣ ಹೆಚ್ಚು ಪ್ರಜಾಸತ್ತೀಯವಾಗುತ್ತಿದೆ: ರಾಜ್ಯವರ್ಧನ್ ಸಿಂಗ್ ರಾಥೋಡ್
ಭಾರತೀಯ ಪನೋರಮಾ ವಿಭಾಗದ ಸಿನಿಮಾಗಳು ಮನುಷ್ಯನ ಭಾವನೆಗಳಿಗೆ ಹತ್ತಿರವಾಗಿದ್ದು...
ನವದೆಹಲಿ: ಭಾರತೀಯ ಪನೋರಮಾ ವಿಭಾಗದ ಸಿನಿಮಾಗಳು ಮನುಷ್ಯನ ಭಾವನೆಗಳಿಗೆ ಹತ್ತಿರವಾಗಿದ್ದು, ಅವುಗಳನ್ನು ಭಾರತೀಯ ಪ್ರೇಕ್ಷಕರು ತಮ್ಮ ಸಂಸ್ಕೃತಿ, ಪ್ರದೇಶ, ಭಾಷೆಗಳಿಗೆ ಸಂಬಂಧ ಕಲ್ಪಿಸಬಹುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ.
ದೆಹಲಿಯ ಸಿರಿ ಫೋರ್ಟ್ ಸಭಾಂಗಣದಲ್ಲಿ ಅವರು ನಿನ್ನೆ ಸಂಜೆ ಭಾರತೀಯ ಪನೋರಮಾ ಚಿತ್ರೋತ್ಸವವನ್ನು ಉದ್ಘಾಟಿಸಿದ ಬಳಿಕ ಮಾತನಾಡಿ, ಸಿನಿಮಾ ಮೂಲಕ ಕಥೆ ಹೇಳುವ ಕಲೆ ಬದಲಾವಣೆಯ ಸಮಯಕ್ಕೆ ತಕ್ಕಂತೆ ವ್ಯತ್ಯಾಸವಾಗುತ್ತಿದ್ದು, ನಿಜ ಜೀವನ ಆಧಾರಿತ ಸ್ಫೂರ್ತಿಯ ಕಥೆಗಳನ್ನಿಟ್ಟುಕೊಂಡು ಸಿನಿಮಾ ತಯಾರಿಸುವ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಚಿತ್ರೋದ್ಯಮದಲ್ಲಿ ಕಂಡುಬರುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನದ ಪ್ರಗತಿ ಮತ್ತು ಉದ್ಯಮದ ಶೈಲಿ ಬದಲಾವಣೆಯಿಂದ ಚಲನಚಿತ್ರ ತಯಾರಿ ಹೆಚ್ಚು ಪ್ರಜಾಸತ್ತಾತ್ಮಕವಾಗುತ್ತಿದೆ. ಗುಣಮಟ್ಟಕ್ಕೆ ಆದ್ಯತೆ ನೀಡುತ್ತಾ ಕ್ರಿಯಾಶೀಲತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.
ವಾಣಿಜ್ಯ ಮತ್ತು ಕಲಾತ್ಮಕ ಚಿತ್ರಗಳ ನಡುವಿನ ಅಂತರ ಕಡಿಮೆಯಾಗುತ್ತಿದ್ದು ಕಡಿಮೆ ಬಜೆಟ್ ನ ಚಿತ್ರಗಳು ಕೂಡ ಬಾಕ್ಸ್ ಆಫೀಸಿನಲ್ಲಿ ಕೆಲವೊಮ್ಮೆ ಗೆಲ್ಲುತ್ತಿವೆ ಎಂದರು.
ಇದೇ ಸಂದರ್ಭದಲ್ಲಿ ಹಿಂದಿಯ ಹಿರಿಯ ನಟ ಓಂ ಪುರಿ ಅವರಿಗೆ ಕಾರ್ಯಕ್ರಮದಲ್ಲಿ ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿರಿಯ ನಟರ ಗೌರವಾರ್ಥ ಓಂ ಪುರಿಯವರು ನಟಿಸಿದ 5 ಅತ್ಯುತ್ತಮ ಚಿತ್ರಗಳ ಪ್ರದರ್ಶನ ಪನೋರಮಾ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ