ವಾಲ್ಮೀಕಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ನಟಿ ರಾಖಿ ಸಾವಂತ್'ಗೆ ಜಾಮೀನು ಮಂಜೂರು

ರಾಮಾಯಣ ರಚನಕಾರ ವಾಲ್ಮೀಕಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಾಲಿವುಡ್ ನಟಿ ರಾಖಿ ಸಾವಂತ್'ಗೆ ಪಂಜಾಬ್ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ...
ನಟಿ ರಾಖಿ ಸಾವಂತ್
ನಟಿ ರಾಖಿ ಸಾವಂತ್
ಲುಧಿಯಾನಾ: ರಾಮಾಯಣ ರಚನಕಾರ ವಾಲ್ಮೀಕಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಾಲಿವುಡ್ ನಟಿ ರಾಖಿ ಸಾವಂತ್'ಗೆ ಪಂಜಾಬ್ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. 
ವಾಲ್ಮೀಕಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ರಾಖಿ ಮೇಲೆ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯ ಮೇಲೆ ಲುಧಿಯಾನಾ ನ್ಯಾಯಾಲಯದ ಬಂಧನಾದೇಶ ಹೊರಡಿಸಿತ್ತು. ಇದರಂತೆ ಇಂದು ನಟಿ ರಾಖಿ ಸಾವಂತ್ ಅವರು ವಿಚಾರಣೆಗೆ ಖುದ್ದು ಹಾಜರಾಗಿದ್ದರು. 
ಪ್ರಕರಣ ಸಂಬಂಧ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ರೂ.1 ಲಕ್ಷದ ಎರಡು ಬಾಂಡ್ ಗಳನ್ನು ಪಡೆದುಕೊಂಡು ರಾಖಿ ಸಾವಂತ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇದೀಗ ರಾಖಿ ಸಾವಂತ್ ಅವರು ಮುಂಬೈ ನತ್ತ ಪ್ರಯಾಣ ಬೆಳೆಸಿದ್ದಾರೆಂದು ತಿಳಿದುಬಂದಿದೆ. 
ಕಳೆದ ವರ್ಷ ಖಾಸಗಿ ವಾಹನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಖಿ ಸಾವಂತ್ ಅವರು, ವಾಲ್ಮೀಕಿ ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಹೇಳಿಕೆಯನ್ನು ನೀಡಿದ್ದರು ಎಂದು ದೂರು ದಾಖಲಾಗಿತ್ತು. 
ಆ ದೂರನ್ನು ಆಧರಿಸಿ ಮಾರ್ಚ್ 9 ರಂದು ನ್ಯಾಯಾಲಯ ರಾಖಿ ಸಾವಂತ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. 
ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ರಾಖಿ ಸಾವಂತ್ ಅವರು ತಿರಸ್ಕರಿಸಿದ್ದು, ನಾನು ಸಲ್ಮಾನ್ ಖಾನ್ ಅಲ್ಲ. ನಾನು ರಾಖಿ ಸಾವಂತ್. ನನ್ನ ವಿರುದ್ಧ ಪ್ರಕರಣ ದಾಖಲಿಸುವುದರಿಂದ ನಿಮಗೆ ಏನೂ ಸಿಗುವುದಿಲ್ಲ. ನಾನೊಬ್ಬಳು ಸಾಮಾನ್ಯ ಹುಡುಗಿಯಾಗಿದ್ದು, ಸಮಾಜಕ್ಕಾಗಿ ಹಾಗೂ ಸಿನಿಮಾಗಳಿಗಾಗಿ ಕೆಲಸ ಮಾಡುವ ವ್ಯಕ್ತಿಯಾಗಿದ್ದೇನೆ. 
ಬಾಲ್ಯದಲ್ಲಿ ನಾನು ಓದಿದ್ದನ್ನು ನಾನು ಉದಾಹರಣೆಯಾಗಿ ನೀಡಿದ್ದೆ. ಕಳ್ಳನಾಗಿದ್ದ ವಾಲ್ಮೀಕಿ ಮಮಹರ್ಷಿಯಾಗಿ ಹೇಗೆ ಪರಿವರ್ತನೆಗೊಂಡರು, ಮಿಕಾ ಜಿ ಅವರು ಹಾಗೆಯೇ ಬದಲಾವಣೆಗೊಂಡಿದ್ದಾರೆಂದು ಹೇಳಿದ್ದೆ. ಅದು ಕೇವಲ ಉದಾಹರಣೆಯಾಗಿ ನೀಡಿದ್ದೆ ಅಷ್ಟೆ. ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ, ಈ ಮೂಲಕ ಬೇಷರತ್ ಕ್ಷಮೆಯಾಚಿಸುತ್ತೇನೆ. ವಾಲ್ಮೀಕಿ ಸಮುದಾಯದ ಸಹೋದರ ಹಾಗೂ ಸಹೋದರಿಯರಿದೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಉದ್ದೇಶಪೂರ್ವಕವಾಗಿ ಯಾವುದನ್ನೂ ಹೇಳಿಲ್ಲ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com