ಚೆನ್ನೈ: ಭೂಗತ ಲೋಕದ ತಮಿಳು ಸಿನೆಮಾ 'ಕಾಲ'ದ ಮುಂಬೈ ಭಾಗದ ಚಿತ್ರೀಕರಣವನ್ನು ಸೂಪರ್ ಸ್ಟಾರ್ ರಜನಿಕಾಂತ್ ಪೂರ್ಣಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
"ರಜನಿ ಸರ್ ತಮ್ಮ ಭಾಗವನ್ನು ಸಂಪೂರ್ಣಗೊಳಿಸಿದ್ದು, ಅವರು ಈ ವಾರ ಚೆನ್ನೈಗೆ ಹಿಂದಿರುಗಲಿದ್ದಾರೆ. ಅವರು ಕಳೆದ ಎರಡು ವಾರಗಳವರೆಗೆ ವಿರಾಮವಿಲ್ಲದೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಉಳಿದ ಚಿತ್ರತಂಡ ಇನ್ನೊಂದು ವಾರ ಚಿತ್ರೀಕರಣದಲ್ಲಿ ಭಾಗಿಯಾಗಲಿದೆ" ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ಎರಡನೇ ಹಂತದ ಚಿತ್ರೀಕರಣ ಚೆನ್ನೈನಲ್ಲಿ ತಲೆ ಎತ್ತಿರುವ ಧರವಿ ಸ್ಲಮ್ ಸೆಟ್ ನಲ್ಲಿ ನಡೆಯಲಿದೆ.
"ರಜನಿ ಸರ್ ಇದರಲ್ಲಿ ಸ್ಲಮ್ ದೊರೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮೊದಲು ಇದನ್ನು ಧರವಿಯಲ್ಲೇ ಶೂಟ್ ಮಾಡುವ ಯೋಜನೆ ಇತ್ತು ಆದರೆ ಇದು ಅಸಾಧ್ಯ ಎಂದು ನಮಗೆ ನಂತರ ಅರಿವಾಯಿತು. ಆದುದರಿಂದ ಚೆನ್ನೈನಲ್ಲಿಯೇ ವಿಸ್ತೃತವಾದ ಸೆಟ್ ಹಾಕಲಾಗಿದೆ" ಎಂದು ಮೂಲಗಳು ತಿಳಿಸಿವೆ.
ಪ ರಂಜಿತ್ ನಿರ್ದೇಶನದ ಈ ಸಿನೆಮಾದಲ್ಲಿ ನಾನಾ ಪಾಟೇಕರ್, ಹುಮಾ ಖುರೇಷಿ, ಅಂಜಲಿ ಪಾಟೀಲ್, ಸಮುದ್ರಕಿಣಿ ಮತ್ತು ಪಂಕಜ್ ತ್ರಿಪಾಠಿ ನಟಿಸುತ್ತಿದ್ದಾರೆ.
ಕಳೆದ ವರ್ಷದ 'ಕಬಾಲಿ' ಸಿನೆಮಾದ ನಂತರ ರಜನಿಕಾಂತ್ ಮತ್ತು ರಂಜಿತ್ ಮತ್ತೆ ಒಂದಾಗಿದ್ದಾರೆ. ಧನುಷ್ ಈ ಸಿನೆಮಾವನ್ನು ನಿರ್ಮಿಸುತ್ತಿದ್ದು, ಅವರು ಕೂಡ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.