ಬೆಂಗಳೂರು: ನಟಿ ಅಮೂಲ್ಯ ನಟಿಸಿರುವ 'ಮಾಸ್ತಿ ಗುಡಿ' ಸಿನೆಮಾಗೆ ಸೆನ್ಸಾರ್ ಮಂಡಳಿ 'ಯು/ಎ' ಪ್ರಮಾಣಪತ್ರ ನೀಡಿದೆ. ಮೊದಲೇ ನಿಗದಿಯಾದಂತೆ ಈಗ ನಿರ್ಮಾಪಕರು ಮೇ ೧೨ ರಂದು ಸಿನೆಮಾ ಬಿಡುಗಡೆ ಮಾಡಿದರೆ, ಅಂದೇ ಸಪ್ತಪದಿ ತುಳಿಯುತ್ತಿರುವ ನಟಿ ಅಮೂಲ್ಯ ಅವರಿಗೆ ಇದು ಡಬಲ್ ಸಂಭ್ರಮ!
ಕೃತಿ ಕರಬಂಧ ಕೂಡ ನಟಿಸಿರುವ 'ಮಾಸ್ತಿ ಗುಡಿ' ಸಿನೆಮಾದಲ್ಲಿ ದುನಿಯಾ ವಿಜಯ್ ಎದುರು ಅಮೂಲ್ಯ ನಟಿಸಿದ್ದಾರೆ. ಮಾಜಿ ಕಾರ್ಪೊರೇಟರ್ ಪುತ್ರ ಜಗದೀಶ್ ಆರ್ ಚಂದ್ರು ಜೊತೆಗೆ ಅಮೂಲ್ಯ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಈಗಾಗಲೇ ಬ್ಯಾಚಲರ್ ಔತಣಕೂಟ ಕೊಟ್ಟು ಮುಗಿಸಿರುವ ನಟಿ, ವಿಶೇಷ ದಿನಕ್ಕೆ ನಂಟರು ಮತ್ತು ಗೆಳೆಯರನ್ನು ಆಹ್ವಾನಿಸುತ್ತಿದ್ದಾರೆ. "ಈಗ ನನ್ನ ಗುರಿ ನನ್ನ ವೈಯಕ್ತಿಕ ಜೀವನದ ಮೇಲೆ ಇರಲಿದೆ" ಎನ್ನುವ ನಟಿ "ನನ್ನ ನಿಶ್ಚಿತಾರ್ಥದ ನಂತರ ನಿರ್ಮಾಪಕರು ನನ್ನನ್ನು ಸಂಪರ್ಕಿಸುತ್ತಲೇ ಇಲ್ಲ. ಈಗ 'ಮಾಸ್ತಿ ಗುಡಿ' ಬಿಡುಗಡೆ ನನ್ನ ಮದುವೆ ದಿನವೇ ಇದೆ. ನನಗೆ ಕೆಲವು ತಿಂಗಳುಗಳ ಕಾಲ ಸಮಯ ಇದ್ದರೆ ಸಿನೆಮಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದೆ. ಈ ಸಿನೆಮಾ ನನಗೆ ವಿಶೇಷವಾದದ್ದು" ಎನ್ನುತ್ತಾರೆ ಅಮೂಲ್ಯ.
೨೦೦೧ರಲ್ಲಿ 'ಪರ್ವ' ಸಿನೆಮಾದ ಮೂಲಕ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ್ದ ಅಮೂಲ್ಯ 'ಚೆಲುವಿನ ಚಿತ್ತಾರ' ಸಿನೆಮಾದ ಮೂಲಕ ಜನಪ್ರಿಯರಾದವರು. ಈಗ 'ಚೈತ್ರದ ಚಂದ್ರಮ', 'ನಾನು ನನ್ನ ಕನಸು', 'ಗಜಕೇಸರಿ; ಮತ್ತು 'ಶ್ರಾವಣಿ ಸುಬ್ರಮಣ್ಯ' ಸೇರಿದಂತೆ ೨೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.