ಮೊದಲ ತೆಲುಗು ಬಿಗ್ಬಾಸ್ ರಿಯಾಲಿಟಿ ಶೋ ಯಶಸ್ಸಿನೊಂದಿಗೆ ಮುಕ್ತಾಯಗೊಂಡಿದ್ದು ಇದೀಗ ಬಿಗ್ಬಾಸ್ ಸೀಸನ್ 2ನಲ್ಲಿ ಕೆಲ ಬದಲಾವಣೆಗಳು ಆಗುವ ಸಾಧ್ಯತೆ ಇದೆ.
ತೆಲುಗು ಬಿಗ್ಬಾಸ್ ರಿಯಾಲಿಟಿ ಶೋ ನಡೆಸಿಕೊಟ್ಟಿದ್ದ ಜೂನಿಯರ್ ನಂದಮೂರಿ ತಾರಕರಾಮ್ ಬಿಗ್ಬಾಸ್ ಸೀಸನ್ 2ನಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಅವರ ಜಾಗಕ್ಕೆ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಬರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಜುಲೈನಲ್ಲಿ ಬಿಗ್ಬಾಸ್ ಸೀಸನ್ 2 ಶುರುವಾಗಲಿದ್ದು ಸಮಯದ ಅಭಾವ ಅಥವಾ ಸಂಭಾವನೆ ವಿಚಾರವಾಗಿ ಜೂನಿಯರ್ ಎನ್ಟಿಆರ್ ನಿರೂಪಣೆಯಿಂದ ಹಿಂದೆ ಸರಿದಿದ್ದಾರಾ ಎಂಬ ಪ್ರಶ್ನೆಗಳು ಮೂಡತೊಡಗಿವೆ.
ಸದ್ಯದ ಮಾಹಿತಿ ಪ್ರಕಾರ ಜೂನಿಯರ್ ಎನ್ಟಿಆರ್ ತಮ್ಮ ಮುಂಬರುವ ಚಿತ್ರಗಳಲ್ಲಿ ನಿರ್ದೇಶಕರಾದ ತ್ರಿವಿಕ್ರಮ್ ಮತ್ತು ಎಸ್ಎಸ್ ರಾಜಮೌಳಿ ಜತೆ ಕೆಲಸ ಮಾಡಲಿದ್ದಾರೆ. ಜತೆಗೆ ತಮ್ಮ ಕುಟುಂಬಕ್ಕೆ ಸಮಯ ಕೊಡಬೇಕು ಎಂಬ ಉದ್ದೇಶದಿಂದಾಗಿ ಬಿಗ್ಬಾಸ್ ರಿಯಾಲಿಟಿ ಶೋನಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.