ರಾತ್ರೋರಾತ್ರಿ ನನ್ನನ್ನು ಸ್ಟಾರ್ ನಟಿಯಾಗುವಂತೆ ಮಾಡಿದ್ದರು ಕಾಶಿನಾಥ್: ಉಮಾಶ್ರೀ

ರಾತ್ರೋರಾತ್ರಿ ನಾನು ಸ್ಟಾರ್ ಆಗಲೂ ಕಾಶಿನಾಥ್ ಅವರೇ ಕಾರಣ ಎಂದು ನಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಹೇಳಿದ್ದಾರೆ...
ನಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ
ನಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ
ಬೆಂಗಳೂರು: ರಾತ್ರೋರಾತ್ರಿ ನಾನು ಸ್ಟಾರ್ ಆಗಲೂ ಕಾಶಿನಾಥ್ ಅವರೇ ಕಾರಣ ಎಂದು ನಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಹೇಳಿದ್ದಾರೆ.
ಗುರು ಕಾಶಿನಾಥ್ ಅವರ ನಿಧನ ಹಿನ್ನಲೆಯಲ್ಲಿ ಅಂತಿಮ ದರ್ಶನ ಪಡೆಯುವ ಸಲುವಾಗಿ ಎನ್ಆರ್ ಕಾಲೋನಿಯಲ್ಲಿರುವ ಎಪಿಎಸ್ ಕಾಲೇಜು ಬಳಿ ಬಂದ ಉಮಾಶ್ರೀ ಅವರು, ಕಾಶಿನಾಥ್ ಅವರ ಪಾರ್ಥೀವ ಶರೀರ ನೋಡುತ್ತಿದ್ದಂತೆಯೇ ಭಾವುಕರಾದರು. 
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶಿನಾಥ್ ಅವರೊಂದಿಗೆ ಅನುಭವ ಚಿತ್ರ ಮಾಡಿದ ಬಳಿಕವೂ ನಾನು ಅವರೊಂದಿಗೆ ಎರಡು ಚಿತ್ರಗಳನ್ನು ಮಾಡಿದ್ದೆ. ಆದರೂ, ಅನುಭವ ಚಿತ್ರ ರಾತ್ರೋರಾತ್ರಿ ನಾನು ಸ್ಟಾರ್ ನಟಿ ಆಗುವಂತೆ ಮಾಡಿತ್ತು ಎಂದು ಹೇಳಿದ್ದಾರೆ. 
ನಾನು ಸ್ಟಾರ್ ನಟಿ ಆಗಲು ಕಾರಣ ಕಾಶಿನಾಥ್ ಅವರೇ. ಅಭಿನಯಿಸುವಾಗ ಕಾಶಿನಾಥ್ ಅವರು ಭಾವುಕರಾಗುತ್ತಿದ್ದರು. ಕಣ್ಣುಗಳನ್ನು ಬಳಸಿಕೊಂಡು ಹೇಗೆ ನಟನೆ ಮಾಡಬೇಕೆಂಬುದನ್ನು ಕಾಶಿನಾಥ್ ಅವರು ಹೇಳಿಕೊಟ್ಟಿದ್ದರು. ಚಿತ್ರೀಕರಣ ಸಂದರ್ಭದಲ್ಲಿ ಯಾರ ಮೇಲೂ ಕೂಗಾಡುತ್ತಿರಲಿಲ್ಲ. ಅಭಿನಯ ತೃಪ್ತಿ ಹಾಗೂ ಉತ್ತಮವಾಗಿ ಬರುವವರೆಗೂ ಯಾರೊಬ್ಬ ನಟ-ನಟಿಯರನ್ನೂ ಬಿಡುತ್ತಿರಲಿಲ್ಲ. ಕಾಶಿನಾಥ್ ವಿಶೇಷ ನಿರ್ದೇಶಕರಾಗಿದ್ದರು ಎಂದು ಹೇಳಿದ್ದಾರೆ. 
ಸಚಿವೆಯಾದ ಬಳಿಕ ಕಾಶಿನಾಥ್ ಅವರು ಕರೆ ಮಾಡಿ ನನಗೆ ಅಭಿನಂದಿಸಿದ್ದರು. ಇಡೀ ಚಿತ್ರರಂಗವೇ ನನಗೆ ಅಭಿನಂದನೆಗಳನ್ನು ಹೇಳಿತ್ತು. ಕಳೆದ 33 ವರ್ಷಗಳಿಂದ ಕಾಶಿನಾಥ್ ಅವರು ನನಗೆ ಗೊತ್ತು. ಅವರ ಅಗಲಿಕೆ ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com