ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ ವಿಚಾರದಲ್ಲಿ ಇನ್ನೊಂದು ಮಹತ್ವದ ಬೆಳವಣಿಗೆ ನಡೆದಿದೆ. ನಿನ್ನೆ ಮಧ್ಯರಾತ್ರಿ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ವಿರುದ್ಧ ಶ್ರುತಿ ಹರಿಹರನ್ ಬೆಂಗಳೂರು ಹೈಗ್ರೌಂಡ್ಸ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜೀವ ಬೆದರಿಕೆ ಹಾಗೂ ಖಾಸಗಿತನಕ್ಕೆ ಧಕ್ಕೆ ಆರೋಪದಡಿ ಪ್ರಕರಣದಡಿ ದೂರು ದಾಖಲಾಲ್ಗಿದೆ. ಪ್ರಶಾಂತ್ ವಿರುದ್ಧ ಶ್ರುತಿ ಕೊಲೆ ಬೆದರಿಕೆ ಆರೋಪ ಮಾಡಿದ್ದಾರೆ.
ರಾತ್ರಿ ಸುಮಾರು ಮೂರು ತಾಸು ಪೋಲೀಸ್ ಠಾಣೆಯಲ್ಲೇ ಇದ್ದ ಶ್ರುತಿ ಸರ್ಜಾ ಆಪ್ತ ಸಂಬರಗಿ ವಿರುದ್ಧ ಸಾಮಾಜಿಕ ತಾಣಗಳಲ್ಲಿ ತನ್ನ ತೇಜೋವಧೆ ಮಾಡಿದ್ದ ಆರೋಪವನ್ನೂ ಹೊರಿಸಿದ್ದಾರೆ.
ಇದಕ್ಕೆ ಮುನ್ನ ಗುರುವಾರ ಸಂಜೆ ಅಂಬರೀಶ್ ನೇತೃತ್ವದಲ್ಲಿ ಸಂಧಾನ ಸಭೆಗೆ ಹಾಜರಾಗಿದ್ದ ನಟಿ ಶ್ರುತಿ ಹಾಗೂ ನಟ ಸರ್ಜಾ ಅವರುಗಳು ಪರಸ್ಪರ ಕ್ಷಮೆ ಯಾಚನೆ ಸಾಧ್ಯವೇ ಇಲ್ಲ ಎನ್ನುವ ಮೂಲಕ ಸಂಧಾನ ಮಾತುಕತೆಗೆ ನಿರಾಕರಿಸಿದ್ದರು.
ಇದೀಗ ಶ್ರುತಿ ಅರ್ಜುನ್ ಸರ್ಜಾ ಆಪ್ತರ ಮೇಲೆ ದೂರು ದಾಖಲಿಸಿದ್ದು ಸ್ಯಾಂಡಲ್ ವುಡ್ ನಲ್ಲಿ "ಮೀಟೂ" ಭಾರೀ ಸಂಚಲನವನ್ನೇ ಸೃಷ್ಟಿಸುವಂತೆ ಕಾಣ ಬರುತ್ತಿದೆ.