ಬೆಂಗಳೂರು: ಸ್ಯಾಂಡಲ್ ವುಡ್ ನ ಕನಸಿನ ಕನೆ ಮಾಲಾಶ್ರೀ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಮೂರು ದಶಕಗಳಾಗಿದೆ. ಈ ಕುರಿತು ಅವರೇ ಸ್ವತಃ ಟ್ವೀಟ್ ಮಾಡಿದ್ದಾರೆ. ಅಲ್ಲದೆ "ನನ್ನ ಈ ಸಿನಿ ಪ್ರಯಾಣದಲ್ಲಿ ಜತೆಯಾಗಿ ನನ್ನನ್ನು ಹರಸಿ, ಆಶೀರ್ವದಿಸಿದ ಎಲ್ಲರಿಗೆ ಧನ್ಯವಾದ: ಎಂದಿದ್ದಾರೆ.
"ಕನ್ನಡ ಚಿತ್ರರಂಗಕ್ಕೆ ನಾನು ಬಂದು ಮೂವತ್ತು ವರ್ಷಗಳು ಸಂದಿವೆ. ಅದೆಷ್ಟು ಬೇಗ ಈ ಸಮಯ ಕಳೆದಿದೆ ಎಂದರೆ ನನಗಿದು ಇನ್ನೂ ನಿನ್ನೆ ಮೊನ್ನೆ ಎಂಬಂತೆ ಭಾಸವಾಗುತ್ತಿದೆ." ಅವರು ಟ್ವೀಟ್ ಮೂಲಕ ಹೇಳಿದ್ದಾರೆ.
ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ ನಟಿ ಮಾಲಾಶ್ರೀ ಮೊದಲ ಚಿತ್ರದಲ್ಲೇ ಅಪಾರ ಜನಪ್ರಿಯತೆ ಗಳಿಸಿದ್ದರು. "ಒಳಗೆ ಸೇರಿದರೆ ಗುಂಡು...." ಹಾಡನ್ನಂತೂ ಚಿತ್ರ ರಸಿಕರು ಎಂದಿಗೂ ಮರೆಯಲು ಸಾಧ್ಯವಿಲ್ಲ. 1989ರಲ್ಲಿ ಬಿಡುಗಡೆಯಾಗಿದ್ದ ನಂಜುಂಡಿ ಕಲ್ಯಾಣದಲ್ಲಿ ವರನಟ ರಾಜ್ ಪುತ್ರ ರಾಘವೇಂದ್ರ ರಾಜ್ ಕುಮಾರ್ ಜತೆಗಾತಿಯಾಗಿ ಅಭಿನಯಿಸಿದ್ದು ಈ ಚಿತ್ರ ಬರೋಬ್ಬರಿ 75 ವಾರ ಪ್ರದರ್ಶನ ಕಂಡಿತ್ತು.