ಚಾಲೆಂಜಿಂಗ್ ಸ್ಟಾರ್, ಡಿ ಬಾಸ್, ಬಾಕ್ಸ್ ಆಫೀಸ್ ಸುಲ್ತಾನ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ದರ್ಶನ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಆಗಸ್ಟ್ 11ಕ್ಕೆ 23 ವರ್ಷಗಳನ್ನು ಪೂರೈಸುತ್ತಿದ್ದಾರೆ. ಈ ಸಂದರ್ಭವನ್ನು ಅತ್ಯಂತ ಉತ್ಸಾಹ, ಸಂತೋಷದಿಂದ ಆಚರಿಸಲು ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರರಂಗದ ಅವರ ಹಿತೈಷಿಗಳಲ್ಲಿ ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸಿದ್ದಾರೆ. ಪ್ರೇಮ್, ಪ್ರಜ್ವಲ್ ದೇವರಾಜ್, ಅಭಿಷೇಕ್ ಅಂಬರೀಷ್ ಮೊದಲಾದವರು ಸೋಷಿಯಲ್ ಮೀಡಿಯಾದಲ್ಲಿ ಅವರ ಮುಂಬರುವ ಚಿತ್ರಗಳಿಗೆ ಶುಭಾಶಯ ಕೋರಿ ಅವರ ಚಿತ್ರಗಳ ಪೋಸ್ಟರ್ ಗಳನ್ನು ಟ್ಯಾಗ್ ಮಾಡಿದ್ದಾರೆ. ಅದು ಆನ್ ಲೈನ್ ನಲ್ಲಿ ಟ್ರೆಂಡ್ ಆಗಿದೆ.
ಅಂದಿನ ಖ್ಯಾತ ನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರ ದರ್ಶನ್ ಕಿರುತೆರೆ ಮೂಲಕ ತಮ್ಮ ನಟನೆ ವೃತ್ತಿ ಆರಂಭಿಸಿ ಸ್ಯಾಂಡಲ್ ವುಡ್ ನಲ್ಲಿ ಪರದೆ ಮುಂದೆ ಕಾಣಿಸಿಕೊಳ್ಳುವ ಮೊದಲು ಟೆಕ್ನಿಷಿಯನ್ ಆಗಿ ಕೆಲಸ ಮಾಡಿದ್ದರು. ಆಗಸ್ಟ್ 11, 1997ರಲ್ಲಿ ಬಿಡುಗಡೆಯಾದ ಮಹಾಭಾರತದಲ್ಲಿ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರು. ನಂತರ ಮೆಜೆಸ್ಟಿಕ್ ಚಿತ್ರದಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟರು. ಅದು ಹಿಟ್ ಆಯಿತು, ನಂತರ ದರ್ಶನ್ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಆಗಿ ಮೆರೆದರು.ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳಲ್ಲಿ ಸಹ ನಟಿಸಿ ಸೈ ಎನಿಸಿಕೊಂಡರು.
ಇಲ್ಲಿಯವರೆಗೆ 52 ಚಿತ್ರಗಳನ್ನು ಮಾಡಿರುವ ದರ್ಶನ್ ಅವರನ್ನು ಪ್ರೀತಿಸುವ ಸಾವಿರಾರು ಅಭಿಮಾನಿಗಳಿದ್ದಾರೆ. ಇದೀಗ ಅವರ ರಾಬರ್ಟ್ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ತರುಣ್ ಕಿಶೋರ್ ನಿರ್ದೇಶನ, ಉಮಾಪತಿ ನಿರ್ಮಾಣದ ಚಿತ್ರವಿದು. ನಾಯಕಿಯಾಗಿ ಆಶಾ ಭಟ್ ಅಭಿನಯಿಸಿದ್ದಾರೆ. ದರ್ಶನ್ ಅವರ ನಂತರದ ಚಿತ್ರ ಐತಿಹಾಸಿಕ ರಾಜಾ ವೀರ ಮದಕರಿ ನಾಯಕ.
Advertisement