ಸತ್ತು ಹೋಗಿರುವ ವ್ಯಕ್ತಿ ಬಗ್ಗೆ ಕೆಟ್ಟದಾಗಿ ಮಾತನಾಡುವುದು ತಪ್ಪಾಗುತ್ತದೆ:ನಟ ದರ್ಶನ್
ದಾವಣಗೆರೆ: ಸ್ಯಾಂಡಲ್ ವುಡ್ ಗೆ ಡ್ರಗ್ ಜಾಲ ನಂಟಿದೆ ಎಂಬ ಆರೋಪದ ಕೇಸಿಗೆ ಸಂಬಂಧಪಟ್ಟಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ನೀಡಿರುವ ಹೇಳಿಕೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಪುರಾವೆ ನೀಡಲು ಸಿಸಿಬಿ ಕಚೇರಿ ಎದುರು ಸೋಮವಾರ ಇಂದ್ರಜಿತ್ ಲಂಕೇಶ್ ಹಾಜರಾಗಿ ಹೇಳಿಕೆ ನೀಡುತ್ತಿದ್ದಾರೆ.
ಇದೆಲ್ಲದರ ಬಗ್ಗೆ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ದರ್ಶನ್, ಲೈಟ್ ಬಾಯ್ ನಿಂದ ಸಿನೆಮಾ ವೃತ್ತಿ ಆರಂಭಿಸಿ ಇಂದು ನಾಯಕ ನಟನಾಗಿ ಬೆಳೆಯುವವರೆಗೆ 26 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ, ಡ್ರಗ್ಸ್ ಜಾಲದ ನಂಟು ನನ್ನ ಗಮನಕ್ಕೆ ಬಂದಿಲ್ಲ, ಈ ಬಗ್ಗೆ ನಾನು ಯಾವ ಹೇಳಿಕೆಯೂ ನೀಡುವುದಿಲ್ಲ, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ, ಮಾಧ್ಯಮದವರು ಏನೇನು ಕಲ್ಪಿಸಿ, ಹಾಗೆಯೇ, ಹೀಗೆಯೇ, ಯಾವ ನಟರಾಗಿರಬಹುದು ಎಂದು ಪ್ರಶ್ನೆ ಮಾರ್ಕ್ ಹಾಕಿ ವರದಿ ಮಾಡಬೇಡಿ, ವಿಚಾರಣೆ ನಡೆಯಲಿ, ಸತ್ಯವಾಗಿದ್ದರೆ ಹೆಸರು ಬಹಿರಂಗವಾಗುತ್ತದೆ ಎಂದರು.
ಒಳ್ಳೆಯವರು, ಕೆಟ್ಟವರು ಬರೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ ಎಲ್ಲಾ ಕಡೆ, ಎಲ್ಲಾ ಕ್ಷೇತ್ರದಲ್ಲಿಯೂ ಇರುತ್ತಾರೆ ಎಂದು ಹೇಳಿದ ದರ್ಶನ್ ತರಗತಿಯ ಉದಾಹರಣೆ ಕೊಟ್ಟರು. ಒಂದು ತರಗತಿಯಲ್ಲಿ ಚೆನ್ನಾಗಿ ಓದಿ ರ್ಯಾಂಕ್ ಪಡೆಯುವ ವಿದ್ಯಾರ್ಥಿ ಇರುತ್ತಾರೆ, ಸಾಧಾರಣ ಅಂಕ ಪಡೆಯುವವರು ಇರುತ್ತಾರೆ, ಶೂನ್ಯ ಮಾರ್ಕ್ಸ್ ತೆಗೆದುಕೊಳ್ಳುವರು ಕೂಡ ಇರುತ್ತಾರೆ, ಹಾಗೆಂದು ಇಡೀ ಕ್ಲಾಸ್ ನ ಮಕ್ಕಳು ದಡ್ಡರು, ಯಾರೂ ಸರಿ ಇಲ್ಲ ಎಂದು ಹೇಳಲಾಗುತ್ತದೆಯೇ, ಯಾರೋ ಕೆಲವರು ಮಾಡುವ ತಪ್ಪಿಗೆ ಇಡೀ ಉದ್ಯಮದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಇನ್ನು ಇತ್ತೀಚೆಗೆ ತೀರಿಕೊಂಡ ಯುವ ನಟನ ಹೆಸರನ್ನು ಡ್ರಗ್ ದಂಧೆ ವಿಚಾರದಲ್ಲಿ ಇಂದ್ರಜಿತ್ ಲಂಕೇಶ್ ಪ್ರಸ್ತಾಪಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ದರ್ಶನ್, ಸತ್ತು ಮೂರು ತಿಂಗಳಾದ ವ್ಯಕ್ತಿ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ, ವ್ಯಕ್ತಿ ತೀರಿಹೋದ ಮೇಲೆ ಅವರು ದೇವರ ಸಮಾನ ಎಂದು ನಮಗೆ ತಂದೆ-ತಾಯಿ ಹೇಳಿಕೊಟ್ಟಿದ್ದಾರೆ, ಅಂತವರ ಬಗ್ಗೆ ಮಾತನಾಡುವುದು ಸರಿಯಲ್ಲ, ಒಂದು ವೇಳೆ ಡ್ರಗ್ ಆರೋಪದಲ್ಲಿ ಅಪ್ಪಿತಪ್ಪಿ ಅವರು ಅಪರಾಧಿ ಎಂದು ಸಾಬೀತಾಯಿತು ಎಂದಿಟ್ಟುಕೊಳ್ಳಿ, ಅವರನ್ನು ಕರೆದುಕೊಂಡು ಬಂದು ಶಿಕ್ಷೆ ಕೊಡಿಸಲು ಆಗುತ್ತದೆಯೇ ಎಂದು ಕೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ