ಬೆಂಗಳೂರು: ಬದುಕಿನ ವಿಭಿನ್ನ ಘಟನೆಗಳ ಘರ್ಷಣೆ ಸಾರುವ ಚಿತ್ರ ’ಟಿಪ್ಪುವರ್ಧನ್’ ’V4 streem’ OTT ಮೂಲಕ ಡಾ.ವಿಷ್ಣುವರ್ಧನ್ ಹುಟ್ಟಹಬ್ಬದಂದು ವಿಶ್ವದಾದ್ಯಂತ ಪ್ರಸಾರವಾಗಲಿದೆ.
ಮಂಗಳವಾರದಂದು ‘ಟಿಪ್ಪುವರ್ಧನ್’ ಟ್ರೈಲರ್ ಬಿಡುಗಡೆಗೊಂಡಿದ್ದು ಖ್ಯಾತ ಸಂಕಲನಕಾರ ನಾಗೇಂದ್ರ ಅರಸು, ನಟ ಅಮಿತ್, ವಿ ಸ್ಟ್ರೀಮ್ ಪದಾಧಿಕಾರಿಗಳು ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಕೋರಿದರು.
ಚಿತ್ರಕಥೆ, ಸಂಭಾಷಣೆ, ಎರಡು ಹಾಡುಗಳಿಗೆ ಸಾಹಿತ್ಯ, ನಿರ್ಮಾಣ, ನಿರ್ದೇಶನ ಮತ್ತು ಪ್ರಾಮಾಣಿಕ ರಾಜಕಾರಣಿಯ ಮುಖ್ಯ ಪಾತ್ರಕ್ಕೆ ನಟ ಎಂ.ಟಿಪ್ಪುವರ್ಧನ್ ಬಣ್ಣ ಹಚ್ಚಿರುವುದು ವಿಶೇಷ.
ಮೂರು ಹಂತದಲ್ಲಿ ಬರುವ ಕತೆಯ ಮೂಲಕ ರಾಜಕೀಯ ವ್ಯಕ್ತಿಗಳು ಜನತೆಗೆ ಯಾವಾಗಲೂ ಒಳ್ಳೆಯದನ್ನೇ ಮಾಡಬೇಕೆಂದು ಸಂದೇಶ ಹೇಳುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ಹಿಂದು-ಮುಸ್ಲಿಂ ವಿಭಿನ್ನ ಜಾತಿಯ ಗೆಳೆಯರ ಗೆಳೆತನದ ನಂಟು, ಪ್ರೀತಿಯನ್ನು ಹೇಳಲಾಗಿದೆ. ಭ್ರಷ್ಟ, ಪ್ರಾಮಾಣಿಕ ರಾಜಕಾರಣಿಗಳ ಮಧ್ಯೆ ಘರ್ಷಣೆ ಆದಾಗ, ಅದಕ್ಕೆ ಒಳ್ಳೆಯ ಉತ್ತರವನ್ನು ಶಿಸ್ತಿನ ರಾಜಕಾರಣಿ ಹೇಳುತ್ತಾ ಹೋಗುತ್ತಾನೆ ಮತ್ತು ಐಎಎಸ್ ಹುಡುಗನ ಕನ್ನಡ ಪ್ರೇಮ ದಿಟ್ಟತನದ ಅಧಿಕಾರ ಸೇವೆ ಎತ್ತಿ ತೋರಿಸಿರುವುದು ಹಿರಿಮೆಯಾಗಿದೆ.
ತಾರಗಣದಲ್ಲಿ ಅರಸಿಕೆರೆಕೇಶವಮೂರ್ತಿ, ಇನ್ಸಾಫ್ಖಾನ್, ಸೂರಜ್ಟಿಪ್ಪು, ವಟಗಲ್ನಾಗರಾಜ್. ತೇಜಸ್ವಿನಿ, ಗೀತಪ್ರಿಯ, ರಮ್ಯ, ಮೈಕಲ್ಮಧು. ಡಾ.ಚಿಕ್ಕಹೆಜ್ಜಾಜಿಮಹಾದೇವ್, ನಂದಕುಮಾರ್ ಮುಂತಾದವರು ನಟಿಸಿದ್ದಾರೆ.
ನಾಲ್ಕು ಹಾಡುಗಳಿಗೆ ಆರ್.ದಾಮೋದರ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಬಾಬು, ಸಂಕಲನ ಕವಿತಾಭಂಡಾರಿ ಅವರದಾಗಿದೆ. ಬೆಂಗಳೂರು, ಗಜೇಂದ್ರಗಡ, ಕೋಲಾರ ಮತ್ತು ಬಂಗಾರಪೇಟೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಆರ್.ಬಿ.ನಡಾಫ್ ಗಜೇಂದ್ರಗಡ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಟಿಪ್ಪುವರ್ಧನ್ ಅವರು ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿದ್ದು, ಅವರ ಹುಟ್ಟಹಬ್ಬದ ಪ್ರಯುಕ್ತ ಸಿನಿಮಾವನ್ನು ಸಾಹಸ ಸಿಂಹನಿಗೆ ಅರ್ಪಿಸುವ ಸಲುವಾಗಿ ಅದೇ ದಿನದಂದು ಓಟಿಟಿ ಮೂಲಕ ಜನರಿಗೆ ತೋರಿಸುತ್ತಿದ್ದಾರೆ.
Advertisement