ಸ್ಯಾಂಡಲ್ವುಡ್ನ ಹಿರಿಯ ನಿರ್ದೇಶಕ ಎಸ್. ನಾರಾಯಣ್ ಮತ್ತು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಒಟ್ಟಾಗಿ ಮತ್ತೊಂದು ಸಿನಿಮಾ ಮಾಡಲು ಸಿದ್ಧತೆ ನಡೆಸಿದ್ದಾರೆ.
ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿಯವರು ರಾಜಕೀಯಕ್ಕೆ ಬರುವುದಕ್ಕೂ ಮುನ್ನ ಸಿನಿಮಾ ರಂಗದಲ್ಲಿ ವಿತರಕರಾಗಿ, ನಿರ್ಮಾಪಕರಾಗಿ ಹೆಸರು ಮಾಡಿದವರು. ಸೂರ್ಯವಂಶ', 'ಚಂದ್ರಚಕೋರಿ', 'ಗಲಾಟೆ ಅಳಿಯಂದ್ರು' ತರಹದ ಸೂಪರ್ ಹಿಟ್ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು. ಈ ಮೂರು ಸಿನಿಮಾಗಳನ್ನೂ ಎಸ್. ನಾರಾಯಣ್ ಅವರೇ ನಿರ್ದೇಶನ ಮಾಡಿದ್ದರು ಎಂಬುದು ವಿಶೇಷ.
ಕನ್ನಡದ ಖ್ಯಾತ ಸಾಹಿತಿ ವ್ಯಾಸರಾಯ ಬಲ್ಲಾಳರ 'ಹೆಜ್ಜೆ' ಕಾದಂಬರಿ ಸಿನಿಮಾ ಆಗುತ್ತಿದ್ದು, ಈ ಕಾದಂಬರಿಗಾಗಿ ಹಿರಿಯ ನಿರ್ದೇಶಕ ಎಸ್. ನಾರಾಯಣ್ ಮತ್ತು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಜತೆಯಾಗಿದ್ದಾರೆ. ವ್ಯಾಸರಾಯ ಬಲ್ಲಾಳರು ಬರೆದ 'ಹೆಜ್ಜೆ' ಕಾದಂಬರಿ ಸ್ವಾತಂತ್ರ್ಯಪೂರ್ವದಲ್ಲಿನ ಒಂದು ಕುಟುಂಬದ ಕಥೆ. ಈ ಕಾದಂಬರಿಯನ್ನು ಸಿನಿಮಾ ಮಾಡುವ ಬಗ್ಗೆ ಹಲವು ವರ್ಷಗಳ ಹಿಂದೆಯೇ ಎಸ್. ನಾರಾಯಣ್ ಚಿಂತಿಸಿದ್ದರು. ಕಮಲ್ ಹಾಸನ್ ಮತ್ತು ಐಶ್ವರ್ಯಾರೈ ಅವರನ್ನು ಕಲಾವಿದರನ್ನಾಗಿ ಆಯ್ಕೆ ಕೂಡ ಮಾಡಿಕೊಂಡಿದ್ದರಂತೆ. ಕಮಲ್ ಕಥೆ ಕೇಳಿ ಥ್ರಿಲ್ ಆಗಿದ್ದರು ಎಂದು ಸ್ವತಃ ನಾರಾಯಣ್ ಅವರೇ ಹೇಳಿದ್ದಾರೆ. ಅಮರಿಷ್ ಪುರಿ ಮತ್ತು ಗಿರೀಶ್ ಕಾರ್ನಾಡ್ ಕೂಡ ನಟಿಸಬೇಕಿತ್ತು ಎಂದು ನಾರಾಯಣ್ ಹೇಳಿದ್ದಾರೆ.
ಸದ್ಯಕ್ಕೆ ಕುಮಾರಸ್ವಾಮಿಯವರ ಜತೆ ಮೊದಲ ಹಂತದ ಮೀಟಿಂಗ್ ಆಗಿದೆ. ನನ್ನ ಮತ್ತು ಕುಮಾರಸ್ವಾಮಿಯವರ ಕಾಂಬಿನೇಷನ್ನ ಸಿನಿಮಾ ಎಂದರೆ ಅಲ್ಲಿ ಮೌಲ್ಯಧಾರಿತ ಕಥೆ ಇರುತ್ತದೆ. ಆ ನಿಟ್ಟಿನಲ್ಲಿ 'ಹೆಜ್ಜೆ' ಬಹಳ ಒಳ್ಳೆಯ ಆಯ್ಕೆ. ಉಳಿದ ವಿವರಗಳನ್ನು ಸದ್ಯದಲ್ಲೆ ತಿಳಿಸುತ್ತೇನೆ ಎಂದು ಎಸ್ ನಾರಾಯಣ್ ತಿಳಿಸಿದ್ದಾರೆ.
ನಾರಾಯಣ್ ಸದ್ಯ '5ಡಿ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಇದರ ನಡುವೆಯೂ 'ಹೆಜ್ಜೆ' ಕಾದಂಬರಿಯನ್ನು ಸಿನಿಮಾವಾಗಿಸುವ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಇದುವರೆಗೆ ಎಸ್. ನಾರಾಯಣ್ ಮತ್ತು ಕುಮಾರಸ್ವಾಮಿ ಕಾಂಬಿನೇಶನ್ನಲ್ಲಿ ಮೂಡಿ ಬಂದ ಸಿನಿಮಾಗಳೆಲ್ಲವೂ ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಕುಮಾರಸ್ವಾಮಿ ಅವರು ಶಿಸ್ತುಬದ್ದ ನಿರ್ಮಾಪಕ. ಹಾಗಾಗಿ ಇವರಿಬ್ಬರ ಕಾಂಬಿನೇಶನ್ನ ಸಿನಿಮಾ ಮೇಲೆ ಒಂದು ನಿರೀಕ್ಷೆ ಇದ್ದೇ ಇರುತ್ತದೆ.
Advertisement