ಬೆಂಗಳೂರು: ಕನ್ನಡದ ಹಿರಿಯ ನಟ ಜಗ್ಗೇಶ್ ಅವರ ಕಿರಿಯ ಪುತ್ರ ಯತಿರಾಜ್ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು ನಿನ್ನೆ ಮಧ್ಯಾಹ್ನ ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ಚಿಕ್ಕಬಳ್ಳಾಪುರ ಹತ್ತಿರ ಅಗಲಗುರ್ಕಿ ಎಂಬಲ್ಲಿ ತೀವ್ರ ಅಪಘಾತಕ್ಕೀಡಾಗಿತ್ತು.
ಅಪಘಾತ ಎಷ್ಟು ಗಂಭೀರವಾಗಿತ್ತೆಂದರೆ ಬೈಕ್ ಮತ್ತು ಅಡ್ಡಲಾಗಿ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಕಾರು ಮೂರು ಪಲ್ಟಿಯಾಗಿ ರಸ್ತೆಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದು ತಿರುಗಿ ನಿಂತಿತ್ತು. ಡಿಕ್ಕಿಯ ರಭಸಕ್ಕೆ ಮರದ ಕೊಂಬೆ ಮುರಿದುಬಿದ್ದಿದೆ. ಕಾರಿನ ಮುಂದಿನ ಚಕ್ರವೊಂದು ಸ್ಫೋಟಗೊಂಡು ಸಂಪೂರ್ಣ ಜಖಂ ಆಗಿದೆ.
ಕಾರಿನ ಏರ್ ಬ್ಯಾಗ್ ತೆರೆದದ್ದರಿಂದ ಒಳಗಿದ್ದ ಯತಿರಾಜು ಪ್ರಾಣಾಪಾಯಗಳಿಂದ ಪಾರಾಗಿದ್ದಾರೆ. ಯತಿರಾಜು ಅವರನ್ನು ಸ್ಥಳೀಯರು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರು.
ತಮ್ಮ ಮಗನಿಗೆ ಕಾರು ಅಪಘಾತದಲ್ಲಿ ಬಲವಾದ ಏಟು ಬಿದ್ದಿದ್ದು ಪಕ್ಕೆ ಮೂಳೆ ಬಲತೊಡೆಯ ಮೂಳೆಕಟ್ಟಿಗೆ ಬಹಳ ಪೆಟ್ಟಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಕಾರು ಅಪಘಾತವಾದ ಬಳಿಕ ನನ್ನ ಮನಸ್ಸಿನಲ್ಲಿ ಏನೆಲ್ಲಾ ಕೆಟ್ಟ ಕಲ್ಪನೆಗಳು ಕಾಡುತ್ತಿವೆ. ಇಂತಹ ಸಂದರ್ಭದಲ್ಲಿ ನನಗೆ ನನ್ನ ಅಪ್ಪನ ನೆನಪಾಗುತ್ತಿದೆ.ಮಕ್ಕಳಿಗಾಗಿ ಅವರ ತ್ಯಾಗ, ಬಲಿದಾನದ ಮುಂದೆ ನನ್ನದೇನಿದೆ, ನಾನು ತೃಣ ಎನಿಸುತ್ತಿದೆ ಎಂದು ನಟ ಜಗ್ಗೇಶ್ ಬರೆದುಕೊಂಡಿದ್ದಾರೆ.
Advertisement