ಕೊನೆಗೂ 'ಕಿರಿಕ್ ಪಾರ್ಟಿ'- ಲಹರಿ ವಿವಾದಕ್ಕೆ ಅಂತ್ಯ? ರಕ್ಷಿತ್ ಶೆಟ್ಟಿ ಹೇಳಿದ್ದೇನು?

ಈ ಹಿಂದೆ ಕೆಲ ದಿನಗಳ ಕಾಲ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಕಿರಿಕ್ ಪಾರ್ಟಿ ಚಿತ್ರದ ಹಾಡಿನ ಕಾಪಿರೈಟ್ (ಕೃತಿಸ್ವಾಮ್ಯ) ಉಲ್ಲಂಘನೆ ವಿವಾದ ಕೊನೆಗೂ ಅಂತ್ಯವಾಗಿದ್ದು, ಲಹರಿ ಸಂಸ್ಥೆ ಜೊತೆ ಪರಸ್ಪರ ಮಾತುಕತೆ ಮೂಲಕ ವಿವಾದ ಇತ್ಯರ್ಥ ಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ರಕ್ಷಿತ್ ಶೆಟ್ಟಿ-ಲಹರಿ ವೇಲು
ರಕ್ಷಿತ್ ಶೆಟ್ಟಿ-ಲಹರಿ ವೇಲು

ಬೆಂಗಳೂರು: ಈ ಹಿಂದೆ ಕೆಲ ದಿನಗಳ ಕಾಲ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಕಿರಿಕ್ ಪಾರ್ಟಿ ಚಿತ್ರದ ಹಾಡಿನ ಕಾಪಿರೈಟ್ (ಕೃತಿಸ್ವಾಮ್ಯ) ಉಲ್ಲಂಘನೆ ವಿವಾದ ಕೊನೆಗೂ ಅಂತ್ಯವಾಗಿದ್ದು, ಲಹರಿ ಸಂಸ್ಥೆ ಜೊತೆ ಪರಸ್ಪರ ಮಾತುಕತೆ ಮೂಲಕ ವಿವಾದ ಇತ್ಯರ್ಥ ಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಕಿರಿಕ್ ಪಾರ್ಟಿ ಚಿತ್ರದ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಲಹರಿ ಸಂಸ್ಥೆ ಹಾಗೂ ನಟ ರಕ್ಷಿತ್‌ ಶೆಟ್ಟಿ ಅವರ ನಡುವಿನ ‘ಕಾಪಿರೈಟ್‌’ ವಿವಾದ ಮಾತುಕತೆ ಮೂಲಕವೇ ಬಗೆಹರಿದಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಲಹರಿ ವೇಲು ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಜೊತೆಗಿರುವ  ಸೆಲ್ಫಿಯೊಂದನ್ನು ರಕ್ಷಿತ್‌ ಶೆಟ್ಟಿ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಅಲ್ಲದೆ ಈ ಫೋಟೋ ಜೊತೆ ಒಂದಷ್ಟು ಮಾತುಗಳನ್ನು ಹಂಚಿಕೊಂಡಿರುವ ಅವರು, 'ಒಂದು ಘಟನೆ..ಹಲವು ದೃಷ್ಟಿಕೋನ. ಈ ದೃಷ್ಟಿಕೋನಗಳನ್ನು ಪರಸ್ಪರ ಹಂಚಿಕೊಂಡಾಗ ಹಾಗೂ ಅರ್ಥೈಸಿಕೊಂಡಾಗ ಮನುಷ್ಯರಾಗಿ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ. ಎಲ್ಲವೂ ಪರಸ್ಪರ ಗೌರವ ಮತ್ತು ಪ್ರೀತಿಯ ನಿರ್ದಿಷ್ಟ  ಸಂಧಿಯಲ್ಲಿ ಕೂಡಬೇಕು. ಇದುವೇ ನಮ್ಮೊಳಗಿನ ಹಾಗೂ ಹೊರಗಿನ ಬೆಳವಣಿಗೆಯ ನೈಜ ಗುಣ. ನಾವು ಏನನ್ನೂ ನೀಡಿಲ್ಲ ಏನನ್ನೂ ಪಡೆದುಕೊಂಡಿಲ್ಲ. ನಮ್ಮ ನಮ್ಮ ಅಭಿಪ್ರಾಯಗಳನ್ನಷ್ಟೇ ಹಂಚಿಕೊಂಡಿದ್ದೇವೆ ಎಂದು ರಕ್ಷಿತ್‌ ಟ್ವೀಟ್‌ ಮಾಡಿದ್ದಾರೆ. 

ಏನಿದು ವಿವಾದ?
2016ರ ಡಿಸೆಂಬರ್‌ನಲ್ಲಿ ರಿಷಬ್‌ ಶೆಟ್ಟಿ ನಿರ್ದೇಶನದ ‘ಕಿರಿಕ್‌ ಪಾರ್ಟಿ’ ಚಿತ್ರದ ಬಿಡುಗಡೆ ವೇಳೆ ಲಹರಿ ಸಂಸ್ಥೆಯು ಸಿನಿಮಾ ಬಿಡುಗಡೆಗೆ ತಡೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿತ್ತು. ‘ಶಾಂತಿ ಕ್ರಾಂತಿ’ ಚಿತ್ರದ ಹಾಡನ್ನು ಅನುಮತಿ ಇಲ್ಲದೇ ಬಳಸಲಾಗಿದೆ. ಚಿತ್ರದ ಹಾಡಿನ ಹಕ್ಕು ತಮ್ಮ ಬಳಿ ಇದ್ದು, ತಮ್ಮ ಅನುಮತಿ ಇಲ್ಲದೇ ಹಾಡನ್ನು ಬಳಸಿಕೊಳ್ಳಲಾಗಿದೆ ಎಂದು ಸಂಸ್ಥೆಯು ಆರೋಪಿಸಿತ್ತು. ಲಹರಿ ಸಂಸ್ಥೆಯು ದಾಖಲಿಸಿದ್ದ ಎರಡನೇ ಪ್ರಕರಣದ ವಿಚಾರಣೆಗೆ ಹಲವು ಬಾರಿ ಗೈರಾಗಿದ್ದರಿಂದಾಗಿ ರಕ್ಷಿತ್‌ ಶೆಟ್ಟಿ ಹಾಗೂ ಅಜನೀಶ್‌ ಲೋಕನಾಥ್‌ ಅವರ ವಿರುದ್ಧ ಇತ್ತೀಚೆಗೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com