ದಿವಂಗತ ರಾಷ್ಟ್ರಪತಿ ಅಬ್ದುಲ್ ಕಲಾಂ ಆಡಿದ ಮಾತುಗಳೇ "ಓರಿಯೋ" ಸಿನಿಮಾಗೆ ಸ್ಫೂರ್ತಿ: ನಿರ್ದೇಶಕ ನಂದನ್ ಪ್ರಭು

ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ "ಓರಿಯೋ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.
ಓರಿಯೋ ಚಿತ್ರ ತಂಡ
ಓರಿಯೋ ಚಿತ್ರ ತಂಡ

ಬೆಂಗಳೂರು: ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ "ಓರಿಯೋ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಸದಸ್ಯರಾದ ಮಂಜುನಾಥ್ ಚಾಲನೆ ನೀಡಿದರು.

ಮಾಜಿ‌ ನಗರ ಪಾಲಿಕೆ ಸದಸ್ಯರಾದ ಕೆ.ಮುನಿರಾಜು ಕ್ಯಾಮೆರಾ ಚಾಲನೆ ಮಾಡಿದರು. ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಇಂದಿಗೆ ಅಪ್ಪು ಅವರು ನಮ್ಮನ್ನು ಅಗಲಿ ಒಂದು ತಿಂಗಳಾಯಿತು. ಆದರೂ ದು:ಖ ಕಡಿಮೆಯಾಗಿಲ್ಲ. ಅವರಿಗೆ ನಮ್ಮ ನಮನ ಎಂದು ಮಾತು ಆರಂಭಿಸಿದ ನಿರ್ದೇಶಕ ನಂದನ್ ಪ್ರಭು, ನಾನು ಈ ಹಿಂದೆ 'ಪ್ರೀತಿಯ ಲೋಕ' ಹಾಗೂ 'ಲವ್ ಇಸ್ ಪಾಯಸನ್' ಚಿತ್ರಗಳನ್ನು ನಿರ್ದೇಶಿಸಿದ್ದೆ. ಆರು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿ ಬಂದಿರುವೆ ಎಂದರು.

ನಾನು ನಿರ್ದೇಶನಕ್ಕೆ ಬರುವ ಮೊದಲು ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆಗುವುದಕ್ಕಿಂತ ಮುಂಚೆ ಅವರ ಕಾರಿಗೆ ಚಾಲಕನಾಗಿದ್ದೆ. ಅವರು ನನ್ನೊಂದಿಗೆ ಆಡುತ್ತಿದ್ದ ಮಾತುಗಳು ಈ ಕಥೆಗೆ ಸ್ಪೂರ್ತಿ. "ಓರಿಯೋ" ಪದಕ್ಕೆ ಒಂದೊಂದು ದೇಶದಲ್ಲಿ ಒಂದೊಂದು ಹೆಸರಿದೆ.

ಭಾರತದಲ್ಲಿ ಆ ಹೆಸರಿನ ಬಿಸ್ಕೆಟ್ ಸಹ ಇದೆ ಎಂದು ವಿವರಣೆ ನೀಡಿದರು. ನಾವು ಎಚ್ಚರ ತಪ್ಪಿದರೆ, ಮುಂದೊಂದು ದಿನ ಹೀಗೂ ಆಗಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡುವ ವಿಭಿನ್ನ ಕಥಾಹಂದರ "ಓರಿಯೋ" ಚಿತ್ರದಲ್ಲಿದೆ ಎಂದರು.

ನಾನು ಮೂಲತಃ ಆರ್ಕಿಟೆಕ್ಟ್. ಇದು ನನ್ನ ಮೊದಲ ಚಿತ್ರ. ಪಾತ್ರ ಚೆನ್ನಾಗಿದೆ. ಅವಕಾಶ ನೀಡಿದ ನಂದನ್ ಪ್ರಭು ಅವರಿಗೆ ಧನ್ಯವಾದ ಎಂದರು ಪ್ರಮುಖ ಪಾತ್ರಧಾರಿ ನಿತಿನ್ ಗೌಡ. ನಟ ಸುಚಿತ್, "ರಥಾವರ" ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದೇನೆ. ವೈರ ಹಾಗೂ ಪುಟಾಣಿ ಪಂಟರ್ ಚಿತ್ರಗಳಲ್ಲೂ ಅಭಿನಯಿಸಿದ್ದೇನೆ. ಈ ಚಿತ್ರದಲ್ಲಿ ಉತ್ತಮ ಪಾತ್ರ ನೀಡಿದ್ದಾರೆ ಎಂದು ಹೇಳಿದರು.

ಈ ಚಿತ್ರಕ್ಕೆ “ರಥಾವರ” ಚಿತ್ರದ ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಅವರ ಮಗ “ಗೋವಿಂದ್” ಹಾಗೂ ನೂತನ ಕಲಾವಿದರ ಅಭಿನಯದಲ್ಲಿ ಮೂಡಿ ಬರಲಿದೆ.. “ಕರ್ನಾಟಕ ರತ್ನ” ದೊಡ್ಮನೆ ಮಾಣಿಕ್ಯ ನಮ್ಮೆಲ್ಲರ ಸ್ಫೂರ್ತಿಯಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ ರವರ ಅಗಲಿಕೆ ತುಂಬಾ ನೋವುಂಟು ಮಾಡಿದೆ.. ಅವರ ಹಾದಿಯಲ್ಲಿ ಸ್ವಲ್ಪವಾದರೂ ನಡೆಯಬೇಕು ಎಂಬ ಆಸೆ ಇದೆ ಎಂದ ನಂದನ್ ಪ್ರಭು, ಅಪ್ಪು ಅವರನ್ನು ನೆನೆಯುತ ಭಾವುಕರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com