ಬೆಂಗಳೂರು: ಕೊರೋನಾ ಎರಡನೇ ಅಲೆ ತಗ್ಗಿದ ನಂತರ ಸರ್ಕಾರ ಥಿಯೇಟರ್ ಗಳಲ್ಲಿ ಶೇಕಡಾ 100ರ ಆಸನ ಭರ್ತಿಗೆ ಅನುಮತಿ ನೀಡಿದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಕಳೆದ ವಾರ 'ನಿನ್ನ ಸನಿಹಕೆ' ಚಿತ್ರ ಬಿಡುಗಡೆಯಾಗಿ ಇಂದು ನವರಾತ್ರಿಯ ಆಯುಧ ಪೂಜೆಯ ಶುಭದಿನ ಎರಡೆರಡು ಚಿತ್ರಗಳು ತೆರೆಗೆ ಬರುತ್ತಿವೆ.
ಅದು ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಮತ್ತು ದುನಿಯಾ ವಿಜಯ್ ಅಭಿನಯದ ಸಲಗ ಚಿತ್ರಗಳು. ದುನಿಯಾ ವಿಜಯ್ ಅಭಿಮಾನಿಗಳು ಮುಂಜಾನೆಯಿಂದಲೇ ಥಿಯೇಟರ್ ಗಳ ಮುಂದೆ ಚಿತ್ರ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿರುವ ಸಂದರ್ಭದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಚಿತ್ರ ಗೆಲ್ಲಲಿ ಎಂದು ಆಶಿಸಿ ಹಾರೈಸುತ್ತಿದ್ದಾರೆ.
ಕೋಟಿಗೊಬ್ಬ-3 ಬಿಡುಗಡೆ ಸಂಶಯ?: ಆದರೆ ಕೋಟಿಗೊಬ್ಬ-3 ಚಿತ್ರಕ್ಕೆ ಥಿಯೇಟರ್ ಗಳ ಮುಂದೆ ಬೆಳ್ಳಂಬೆಳಗ್ಗೆ ಬಂದ ಕಿಚ್ಚನ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಕೋಟಿಗೊಬ್ಬ-3 ಬೆಳಗಿನ ಶೋ ಪ್ರದರ್ಶನವಾಗಿಲ್ಲ, ಪ್ರೇಕ್ಷಕರಿಗೆ ಟಿಕೆಟ್ ಸಿಕ್ಕಿಲ್ಲ. ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಅವರ ಗಾಂಧಿನಗರ ಬಳಿಯಿರುವ ಕಚೇರಿಗೆ ಮುತ್ತಿಗೆ ಹಾಕಲು ಅಭಿಮಾನಿಗಳು ಮುಂದಾಗಿದ್ದಾರೆ. ಡಾ ವಿಷ್ಣುವರ್ಧನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಅವಮಾನ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement