ವರಾಹರೂಪಂ ವಿವಾದ: ಹೊಂಬಾಳೆ ಸಂಸ್ಥೆಗೆ ಹಿನ್ನಡೆ; ನಿರ್ಮಾಣ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್
ಕೊಚ್ಚಿ: ಕಾಂತಾರ' ಸಿನಿಮಾದಲ್ಲಿ 'ವರಾಹ ರೂಪಂ' ಹಾಡನ್ನು ಬಳಸದಂತೆ ಎರಡು ಕೆಳ ನ್ಯಾಯಾಲಯಗಳು ನೀಡಿರುವ ಮಧ್ಯಂತರ ತಡೆಯಾಜ್ಞೆ ವಿರುದ್ಧ 'ಕಾಂತಾರ' ಚಿತ್ರದ ನಿರ್ಮಾಪಕ ಸಂಸ್ಥೆ ಹೊಂಬಾಳೆ ಫಿಲಂಸ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಕೇರಳ ಮೂಲದ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ನ 'ನವರಸಂ' ಹಾಡಿನ ಕೃತಿಚೌರ್ಯದ ಆರೋಪ ಈ ಹಾಡಿನ ಮೇಲಿದೆ. ಈ ಕುರಿತ ದಾವೆ ವಿಚಾರಣೆಗೆ ಎತ್ತಿಕೊಂಡಿರುವ ಕೆಳ ನ್ಯಾಯಾಲಯಗಳು ಈ ತಡೆಯಾಜ್ಞೆ ಆದೇಶ ನೀಡಿವೆ.
ಕೇರಳ ಹೈಕೋರ್ಟ್ನ ಸಿಎಸ್ ಡಯಾಸ್ ಅವರ ಏಕ ಸದಸ್ಯ ಪೀಠವು ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ಮತ್ತು ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯದ ಆದೇಶಗಳನ್ನು ಪ್ರಶ್ನಿಸಿ ಹೊಂಬಾಳೆ ಫಿಲಂಸ್ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ಅಲ್ಲದೆ, ಪರ್ಯಾಯ ಕಾನೂನು ಪರಿಹಾರ ಪಡೆಯುವುದಕ್ಕೆ ಅರ್ಜಿದಾರರು ಸ್ವತಂತ್ರರು ಎಂದು ನ್ಯಾಯಪೀಠ ಇದೇ ವೇಳೆ ಹೇಳಿದೆ.
ಈ ನ್ಯಾಯಾಲಯದ ಮೇಲ್ವಿಚಾರಣಾ ಅಧಿಕಾರ ವ್ಯಾಪ್ತಿಯನ್ನು ಅಧೀನ ನ್ಯಾಯಾಲಯಗಳು ಅಂಗೀಕರಿಸಿದ ಪ್ರತಿ ಮಧ್ಯಂತರ ಆದೇಶದೊಂದಿಗೆ ಮಧ್ಯಸ್ಥಿಕೆ ವಹಿಸಬಾರದು. ಹಾಗಿದ್ದಲ್ಲಿ, ಮೂಲ ನ್ಯಾಯವ್ಯಾಪ್ತಿಯ ನ್ಯಾಯಾಲಯಗಳು ಮತ್ತು ಮೇಲ್ಮನವಿ ನ್ಯಾಯಾಲಯಗಳು ನಿಷ್ಕ್ರಿಯವಾಗುತ್ತವೆ ಎಂದು ನ್ಯಾಯಾಲಯವು ವಿವರಿಸಿತು.
ಈ ಅರ್ಜಿಯನ್ನು ಈಗ ವಿಚಾರಣೆಗೆ ಪರಿಗಣಿಸಲಾಗದು ಎಂದ ಕೋರ್ಟ್ ಕಾನೂನಿನಲ್ಲಿ ಲಭ್ಯವಿರುವ ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಹೊಂಬಾಳೆ ಫಿಲ್ಮ್ಸ್ನವರಿಗೆ ಸಲಹೆಯನ್ನು ನೀಡಿತು. ತಡೆಯಾಜ್ಞೆಯ ಆದೇಶದಂತೆ ಹೊಂಬಾಳೆ ಫಿಲ್ಮ್ಸ್ ಮುಂದಿನ ಆದೇಶದವರೆಗೆ ಸಿಂಕ್ರೊನೈಸ್ ಮಾಡಿದ ವರಾಹರೂಪಂ ಗೀತೆಯೊಂದಿಗೆ ಕಾಂತಾರ ಚಿತ್ರದ ಪ್ರದರ್ಶನ, ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಬಿಡುಗಡೆ, ಸ್ಟ್ರೀಮಿಂಗ್ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ಈ ಆದೇಶವನ್ನು ಪ್ರಶ್ನಿಸಿ ಹೊಂಬಾಳೆ ಫಿಲ್ಮ್ಸ್ ಹೈಕೋರ್ಟ್ ಮೊರೆ ಹೋಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ