ಕೌಟುಂಬಿಕ ಕಲಹಕ್ಕೆ ಬೇಸತ್ತು ತಮಿಳಿನ ಕಿರುತೆರೆಯ ಜನಪ್ರಿಯ ಕಲಾವಿದ ಲೋಕೇಶ್ ರಾಜೇಂದ್ರನ್ ಮಂಗಳವಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಲ ಕಲಾವಿದನಾಗಿ ಕಿರುತೆರೆಗೆ ಕಾಲಿಟ್ಟ ಲೋಕೇಶ್ ರಾಜೇಂದ್ರನ್ ಬದುಕು ದುರಂತವಾಗಿ ಅಂತ್ಯಕಂಡಿದೆ.
1996ರ ಸಮಯದಲ್ಲಿ ಪ್ರಸಾರವಾಗುತ್ತಿದ್ದ 'ಮರ್ಮದೇಸಮ್' ಧಾರಾವಾಹಿಯಲ್ಲಿ ಬಾಲ ನಟನಾಗಿ ಖ್ಯಾತಿ ಪಡೆದಿದ್ದ ಲೋಕೇಶ್ ರಾಜೇಂದ್ರನ್ ಅಗಲಿಕೆ ತಮಿಳು ಕಿರುತೆರೆಗೆ ಆಘಾತ ಉಂಟುಮಾಡಿದೆ. ಮರ್ಮದೇಸಮ್ ಧಾರಾವಾಹಿಯ ಐದು ಭಾಗಗಳಲ್ಲಿ 'ವಿಡತು ಕರುಪ್ಪು' ನ ರಾಸು ಪಾತ್ರದ ಮೂಲಕ ಜನರ ಮನಸ್ಸು ತಲುಪಿದ್ದರು. ಬಾಲ್ಯದಿಂದಲೂ ನಟನೆಯ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಲೋಕೇಶ್ ರಾಜೇಂದ್ರನ್ ತಮಿಳಿನ 150ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಹಾಗೂ ಸುಮಾರು 15 ಸಿನಿಮಾಗಳಲ್ಲಿ ನಟಿಸಿ ಜನ ಮನ್ನಣೆ ಗಳಿಸಿದ್ದಾರೆ.
ವಿಜಯಕಾಂತ್, ಪ್ರಭು ಮುಂತಾದವರ ಜೊತೆ ಲೋಕೇಶ್ ತೆರೆ ಹಂಚಿಕೊಂಡಿದ್ದಾರೆ. ಲೋಕೇಶ್ ಅವರಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿವೆ. ಲೋಕೇಶ್ ತಂದೆ ಮಾತನಾಡಿ, "ಲೋಕೇಶ್ ಹಾಗೂ ಅವನ ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಇದೆ ಎಂದು ಒಂದು ತಿಂಗಳ ಹಿಂದೆ ಗೊತ್ತಾಯ್ತು. 4 ದಿನದ ಹಿಂದೆ ಪತ್ನಿ ಲೀಗಲ್ ನೋಟಿಸ್ ನೀಡಿದ್ದಳು. ಲೋಕೇಶ್ ಬೇಸರ ಮಾಡಿಕೊಂಡಿದ್ದನು. ಶುಕ್ರವಾರ ಕೊನೆಯ ಬಾರಿ ನಾನು ಅವನನ್ನು ನೋಡಿದೆ. ದುಡ್ಡು ಬೇಕು ಅಂತ ಅವನು ಕೇಳಿದ್ದಕ್ಕೆ ಕೊಟ್ಟೆ. ಎಡಿಟರ್ ಆಗಿ ಕೆಲಸ ಮಾಡುವೆ ಅಂತ ಅವನು ಅಂದ" ಎಂದು ಮಾಹಿತಿ ನೀಡಿದ್ದಾರೆ.
ಕೌಟುಂಬಿಕ ಸಮಸ್ಯೆಗಳಿಂದಾಗಿ ಲೋಕೇಶ್ ಅವರು ಮದ್ಯವ್ಯಸನಿಯಾಗಿದ್ದರು ಎನ್ನಲಾಗಿದೆ. ಚೆನ್ನೈನ ಬಸ್ಸ್ಟ್ಯಾಂಡ್ನಲ್ಲಿ ಆಗಾಗ ಅವರು ಮಲಗುತ್ತಿದ್ದರು ಎಂಬ ಮಾತು ಕೇಳಿಬಂದಿದೆ. ಸೋಮವಾರ ಬಸ್ ಸ್ಟ್ಯಾಂಡ್ನಲ್ಲಿ ಲೋಕೇಶ್ ಅವರಿಗೆ ಏನೋ ಸಮಸ್ಯೆಯಾಗಿದೆ ಎಂದು ಅಲ್ಲಿದ್ದ ಪ್ರಯಾಣಿಕರೊಬ್ಬರು 108ಕ್ಕೆ ಫೋನ್ ಮಾಡಿ ಆಂಬುಲೆನ್ಸ್ ಕರೆಸಿಕೊಂಡಿದ್ದಾರೆ, ಅಷ್ಟೇ ಅಲ್ಲದೆ ಪೊಲೀಸ್ರಿಗೂ ಮಾಹಿತಿ ನೀಡಿದ್ದಾರೆ. ಆ ವೇಳೆ ಲೋಕೇಶ್ ಅವರನ್ನು ಸರ್ಕಾರಿ ಕಿಲ್ಪೌಕ್ ಮೆಡಿಕಲ್ ಕಾಲೇಜ್, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಂಗಳವಾರ ರಾತ್ರಿ ಲೋಕೇಶ್ ಅವರು ಕೊನೆಯುಸಿರೆಳೆದಿದ್ದಾರೆ" ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಸೆಕ್ಷನ್ 174 ಅಡಿಯಲ್ಲಿ ದೂರು ದಾಖಲಾಗಿದೆ.
ಬಾಲನಟನಾಗಿಯೇ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಈಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತೀವ್ರ ಆಘಾತ ಮೂಡಿಸಿದೆ. ಲೋಕೇಶ್ ರಾಜೇಂದ್ರನ್ ನಿಧನಕ್ಕೆ ತಮಿಳು ಕಿರುತೆರೆಯ ಸೆಲೆಬ್ರಿಟಿಗಳು, ಸೀರಿಯಲ್ ವೀಕ್ಷಕರು ಕಂಬನಿ ಮಿಡಿದಿದ್ದಾರೆ.
Advertisement