ನಿರ್ದೇಶಕನಾಗಲು ಹೊರಟ ಸೃಜನ್ ಲೋಕೇಶ್: ಹಾರರ್-ಥ್ರಿಲ್ಲರ್ ಸಿನಿಮಾಗೆ ಟಾಕಿಂಗ್ ಸ್ಟಾರ್ ಆ್ಯಕ್ಷನ್ ಕಟ್!

ಇಷ್ಟು ದಿನ ನಟನೆ, ನಿರ್ಮಾಣ, ನಿರೂಪಣೆ, ರಿಯಾಲಿಟಿ ಶೋ ಜಡ್ಜ್ ಆಗಿ ಕೆಲಸ ಮಾಡಿದ್ದ ಸೃಜನ್ ಈಗ ನಿರ್ದೇಶಕರಾಗಲು ಸಜ್ಜಾಗಿದ್ದಾರೆ.
ಸೃಜನ್ ಲೋಕೇಶ್
ಸೃಜನ್ ಲೋಕೇಶ್
Updated on

ಇಷ್ಟು ದಿನ ನಟನೆ, ನಿರ್ಮಾಣ, ನಿರೂಪಣೆ, ರಿಯಾಲಿಟಿ ಶೋ ಜಡ್ಜ್ ಆಗಿ ಕೆಲಸ ಮಾಡಿದ್ದ ಸೃಜನ್ ಲೋಕೇಶ್ ಈಗ ನಿರ್ದೇಶಕರಾಗಲು ಸಜ್ಜಾಗಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 'ಹಿರಿಯ ನಿರ್ಮಾಪಕರಾದ ಸಂದೇಶ ನಾಗರಾಜ್ ಹಾಗೂ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಅವರ ಆಶೀರ್ವಾದದೊಂದಿಗೆ ಹೊಸ ಪ್ರಯತ್ನಕ್ಕೆ ಶುಭಾರಂಭ.
ಲೋಕೇಶ್ ಪ್ರೊಡಕ್ಷನ್ಸ್ ಹಾಗೂ ಸಂದೇಸ್‌ ಪ್ರೊಡಕ್ಷನ್ಸ್ ಸಂಸ್ಥೆ ಅಡಿಯಲ್ಲಿ ಹೊಸ ಚಿತ್ರ ನಿರ್ಮಾಣ, ಮತ್ತಷ್ಟು ವಿವರಗಳು ಅತಿ ಶೀಘ್ರದಲ್ಲಿ. ನಿರ್ದೇಶಕನಾಗಿ ನನ್ನ ಮೊದಲ ಪ್ರಯತ್ನ..ನಿಮ್ಮ ಹಾರೈಕೆ ಸದಾ ನಮ್ಮ ಮೇಲೆ ಇರಲಿ' ಎಂದು ಬರೆದುಕೊಂಡಿದ್ದಾರೆ ಸೃಜನ್.

ಈ ಸೃಜನ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾವನ್ನು ಸಂದೇಶ್‌ ಪ್ರೊಡಕ್ಷನ್ಸ್ ನಿರ್ಮಾಣ ಮಾಡಲಿದೆ. ಜೊತೆಗೆ ಲೋಕೇಶ್ ಪ್ರೊಡಕ್ಷನ್ಸ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಲಿದೆ. ಈ ಮೂಲಕ ಹೊಸದೊಂದು ಹೆಜ್ಜೆಯನ್ನು ಇಡಲು ಸೃಜನ್ ಅಣಿಯಾಗಿದ್ದಾರೆ. ಅಂದಹಾಗೆ, ಸೃಜನ್ ಅವರ ತಂದೆ ಲೋಕೇಶ್‌ ಕೂಡ ನಿರ್ದೇಶಕರಾಗಿದ್ದರು. 'ಭುಜಂಗಯ್ಯನ ದಶಾವತಾರ' ಸಿನಿಮಾವನ್ನು ಅವರು ನಿರ್ದೇಶನ ಮಾಡಿದ್ದರು. ಆ ಸಿನಿಮಾಗೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಲೋಕೇಶ್ ಅವರಿಗೆ ಅತ್ಯುತ್ತಮ ನಿರ್ದೇಶಕ ಫಿಲ್ಮ್‌ಫೇರ್ ಪ್ರಶಸ್ತಿ ಕೂಡ ಲಭಿಸಿತ್ತು. ಇದೀಗ ಅವರ ಪುತ್ರ ನಿರ್ದೇಶನಕ್ಕೆ ಎಂಟ್ರಿ ನೀಡಿದ್ದಾರೆ. ಇಲ್ಲಿ ನಿರ್ದೇಶನದ ಜೊತೆಗೆ ಹೀರೋ ಆಗಿಯೂ ಅವರೇ ಕಾಣಿಸಿಕೊಳ್ಳಲಿದ್ದಾರೆ.

ನನ್ನ ಅಜ್ಜ ಸುಬ್ಬಯ್ಯ ನಾಯ್ಡು (ಮೂಕ ಸಿನಿಮಾಗಳ ಮೊದಲ ನಾಯಕ) ಮತ್ತು ನನ್ನ ತಂದೆ ನಟ-ನಿರ್ದೇಶಕ ಲೋಕೇಶ್ ಅವರ ಪರಂಪರೆಯನ್ನು ಮುನ್ನಡೆಸಲು ನನಗೆ ಸಂತೋಷವಾಗಿದೆ. ನನ್ನ ಚೊಚ್ಚಲ ನಿರ್ದೇಶನದ ಸಿನಿಮಾ ಮಾಡಲು ನಾನು ಉತ್ಸುಕನಾಗಿದ್ದೇನೆ. ಈ ಚಿತ್ರದ ಸ್ಕ್ರಿಪ್ಟ್ ಕೂಡ ನಾನೇ ಬರೆದಿದ್ದೇನೆ’ ಎನ್ನುತ್ತಾರೆ.

ಸೃಜನ್ ನಿರ್ದೇಶನ ಮಾಡಲು ಹೊರಟಿರುವ ಈ ಸಿನಿಮಾವು ಒಂದು ಹಾರರ್ ಕಾಮಿಡಿ ಆಗಿದೆ. ಇದಕ್ಕೆ ಸ್ವತಃ ಸೃಜನ್ ಅವರೇ ಸ್ಕ್ರಿಪ್ಟ್ ಬರೆದುಕೊಂಡಿದ್ದು, ಕೆ.ಎಲ್‌. ರಾಜಶೇಖರ್ ಸಂಭಾಷಣೆ ಬರೆಯಲಿದ್ದಾರೆ. ಈ ಹಿಂದೆ 'ಮಜಾ ಟಾಕೀಸ್‌'ಗೆ ಇವರು ಸ್ಕ್ರಿಪ್ಟ್‌ ಬರೆಯುತ್ತಿದ್ದರು. 'ರಾಬರ್ಟ್‌' ಚಿತ್ರಕ್ಕೂ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ಇದೊಂದು ಪಕ್ಕಾ ಮನರಂಜನೆಯ ಸಿನಿಮಾವಾಗಿದ್ದು, ಅದರಲ್ಲೂ ಫ್ಯಾಮಿಲಿ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಲಿದೆಯಂತೆ.  ತಮ್ಮ ಮಧ್ಯಾಹ್ನದ ನಿದ್ದೆ ವೇಳೆ ಕಂಡ ಕನಸ್ಸಿನ ಆಧಾರದ ಕಥೆಯನ್ನು ಬರೆದಿದ್ದಾರೆ.

ಈ ಸಿನಿಮಾದಲ್ಲಿ ಸೃಜನ್ ಅವರ ತಾಯಿ, ಹಿರಿಯ ನಟಿ ಗಿರಿಜಾ ಲೋಕೇಶ್ ಅವರು ಕೂಡ ಬಣ್ಣ ಹಚ್ಚಲಿದ್ದಾರೆ. ಉಳಿದಂತೆ ಯಾರೆಲ್ಲ ಇದ್ದಾರೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಇನ್ನೂ ಹೆಸರಿಡದ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಎಚ್.ಸಿ. ವೇಣು ಅವರ ಛಾಯಾಗ್ರಹಣ ಈ ಸಿನಿಮಾಕ್ಕಿರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com