ನವದೆಹಲಿ: 'ದಿ ಕಾಶ್ಮೀರ್ ಫೈಲ್ಸ್" ಕುರಿತು ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಕಾಶ್ಮೀರಿ ಪಂಡಿತರ ಕ್ಷಮೆಯಾಚಿಸುವುದಾಗಿ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡಾವ್ ಲ್ಯಾಪಿಡ್ ಹೇಳಿದ್ದಾರೆ. ಕಾಶ್ಮೀರಿ ಪಂಡಿತ ಸಮುದಾಯವನ್ನು ಅಥವಾ ನೋವು ಅನುಭವಿಸಿದವರನ್ನು ಅವಮಾನಿಸುವುದು ತನ್ನ ಉದ್ದೇಶವಲ್ಲ ಎಂದಿದ್ದಾರೆ.
ಇತ್ತೀಚಿಗೆ ಗೋವಾದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ಅಧ್ಯಕ್ಷರಾಗಿದ್ದ ಲ್ಯಾಪಿಡ್, ದಿ ಕಾಶ್ಮೀರ್ ಫೈಲ್ಸ್ ಅಸಭ್ಯ, ಕೀಳು ಅಭಿರುಚಿಯದ್ದು ಎಂದು ಹೇಳುವ ಮೂಲಕ ಭಾರಿ ವಿವಾದವನ್ನು ಹುಟ್ಟುಹಾಕಿದ್ದರು.
'ಯಾರನ್ನೂ ನೋವಿಸಲು ನಾನು ಬಯಸಲ್ಲ, ಸಂಕಷ್ಟದಲ್ಲಿರುವ ಜನರು, ಅವರ ಸಂಬಂಧಿಕರನ್ನು ನೋಯಿಸುವುದು ನನ್ನ ಗುರಿಯಲ್ಲ, ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಸಂಪೂರ್ಣವಾಗಿ ಕ್ಷಮೆಯಾಚಿಸುತ್ತೇನೆ ಎಂದು ಲ್ಯಾಪಿಡ್ ಹೇಳಿದ್ದಾರೆ.
ಇದೇ ಸಮಯದಲ್ಲಿ ನನಗಾಗಿ ಮತ್ತು ಕೆಲ ಜ್ಯೂರಿ ಸದಸ್ಯರಿಗೆ ಏನು ಹೇಳಬೇಕೊ ಅದನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಇದು ಅಸಭ್ಯ ಪ್ರಚಾರದ ಚಲನಚಿತ್ರವಾಗಿದ್ದು, ಅಂತಹ ಪ್ರತಿಷ್ಠಿತ ಸ್ಪರ್ಧಾತ್ಮಕ ವಿಭಾಗಕ್ಕೆ ಯೋಗ್ಯವಲ್ಲ ಎಂಬುದನ್ನು ಪದೇ ಪದೇ ಹೇಳಬಹುದು ಎಂದಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಬರೆದು ನಿರ್ದೇಶಿಸಿದ "ದಿ ಕಾಶ್ಮೀರ್ ಫೈಲ್ಸ್" ಭಾರತೀಯ ಪನೋರಮಾ ವಿಭಾಗದಿಂದ ನವೆಂಬರ್ 22 ರಂದು ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.
Advertisement