ಭಾರತೀಯ ಸಿನಿಮಾ ರಂಗದಲ್ಲಿ ಮೇಲುಕೀಳಿನ ಸಮಸ್ಯೆ ಇಂದು ನೆನ್ನೆಯದಲ್ಲ. ಬಾಲಿವುಡ್ ಚಿತ್ರೋದ್ಯಮವೇ ಭಾರತದ ಚಿತ್ರೋದ್ಯಮ ಎನ್ನುವಂತಹ ವಾತಾವರಣ ನಿರ್ಮಾಣವಾಗಿತ್ತು.
ದಕ್ಷಿಣದ ಸಿನಿಮಾಗಳು ಹಿಂದಿ ಚಿತ್ರಗಳಿಗೆ ಸವಾಲಾಗಿ ನಿಂತಿರುವ ಈ ಹೊತ್ತಿನಲ್ಲಿ ಬಾಲಿವುಡ್ ಅನ್ನು ದ್ವೇಷಿಸುವಂತಹ ಕೆಲಸವೂ ನಡೆದಿದೆ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್, ಯಾವ ಸಿನಿಮಾ ರಂಗವನ್ನೂ ಕೀಳಾಗಿ ಕಾಣಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಯೂ ಟ್ಯೂಬ್ ಗೆ ನೀಡಿದ ಸಂದರ್ಶನದಲ್ಲಿ ಯಶ್ ಮಾತನಾಡಿದ್ದಾರೆ. ಅವರು ನೇರ ನುಡಿಗಳಿಂದ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಕರ್ನಾಟಕದ ಜನರು ಬೇರೆ ಇಂಡಸ್ಟ್ರಿ ಬಗ್ಗೆ ಕೀಳಾಗಿ ಮಾತನಾಡಬಾರದು. ಎಲ್ಲರೂ ನಮ್ಮನ್ನು ಹಾಗೆ ನಡೆಸಿಕೊಂಡಾಗ ನಾವು ಕೂಡ ಆ ಸಮಸ್ಯೆಯನ್ನು ಎದುರಿಸಿದ್ದೆವು. ಆ ಗೌರವ ಪಡೆಯಲು ಶ್ರಮಿಸಿದ್ದೇವೆ. ಅದು ಸಿಕ್ಕ ನಂತರ ನಾವು ಯಾರನ್ನೂ ಕೆಟ್ಟದಾಗಿ ನಡೆಸಿಕೊಳ್ಳಬಾರದು. ನಾವು ಎಲ್ಲರನ್ನೂ ಗೌರವಿಸಬೇಕು. ಬಾಲಿವುಡ್ ಅನ್ನು ಗೌರವಿಸಿ. ಈ ಉತ್ತರ ಮತ್ತು ದಕ್ಷಿಣ ಎಂಬುದನ್ನು ಮರೆತುಬಿಡಿ’ ಎಂದು ಕೋರಿದ್ದಾರೆ ಯಶ್.
ನಾವು ಉತ್ತಮ ಸಿನಿಮಾಗಳನ್ನು ಮಾಡಬೇಕು. ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ಚಿತ್ರಮಂದಿರಗಳನ್ನು ನಿರ್ಮಿಸಬೇಕು. ಮಾಡಲು ತುಂಬಾ ಕೆಲಸಗಳಿವೆ. ನಮ್ಮ ನಡುವೆ ಜಗಳವಾಡುವುದನ್ನು ನಾವು ನಿಲ್ಲಿಸಬೇಕಿದೆ. ಹೊರಗಿನ ಪ್ರಪಂಚದೊಂದಿಗೆ ಸ್ಪರ್ಧಿಸಬೇಕಿದೆ’ ಎಂದಿದ್ದಾರೆ. ಈ ಮೂಲಕ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ.
ನನ್ನ ಪ್ರಕಾರ ನೆಪೊಟಿಸಂ ಅಂದರೆ ತನ್ನ ಹಿನ್ನೆಲೆಯ ಬಲದಿಂದ ಉಳಿದವರನ್ನು ತುಳಿಯೋದು. ಅದನ್ನು ಮಾಡದೇ ಪ್ರತಿಭೆ, ಮೆರಿಟ್ ಇದ್ದರೆ ಇಂಡಸ್ಟ್ರಿಯಲ್ಲಿ ಯಾರು ಬೇಕಿದ್ದರೂ ಸಿನಿಮಾ ಮಾಡಬಹುದು. ಬೇರೆ ಚಿತ್ರರಂಗವನ್ನು ತೆಗಳಬೇಡಿ, ಬಾಲಿವುಡ್ಅನ್ನು ಗೌರವಿಸಿ, ಕನ್ನಡ ಅಭಿಮಾನಿಗಳಿಗೆ ಯಶ್ ಮನವಿ ಮಾಡಿದ್ದಾರೆ. ನನ್ನ ಸಕ್ಸಸ್ ಅನ್ನು ನಾನೇ ಹೇಳಿಕೊಳ್ಳೋದು ನನಗೆ ಇಷ್ಟಇಲ್ಲ. ಯಶಸ್ವಿ ಆದರೆ ಜನರಿಗೆ ಅದು ತಿಳಿದೇ ತಿಳಿಯುತ್ತದೆ. ಹೀಗಾಗಿ ನಾನು ಸಿನಿಮಾ ಸಕ್ಸಸ್ ಬಗ್ಗೆ ಮಾತಾಡೋದು ಕಡಿಮೆ ಎಂದಿದ್ದಾರೆ.
Advertisement