ಕನ್ನಡದ ಯಜಮಾನ ವಿಷ್ಣುದಾದರ 13ನೇ ವರ್ಷದ ಪುಣ್ಯದಿನ ಡಿಸೆಂಬರ್ 30. ಕನ್ನಡಿಗರ ಹೃದಯ ಗೆದ್ದ ನಟ ಡಾ. ವಿಷ್ಣುವರ್ಧನ್ ನಮ್ಮನ್ನು ಅಗಲಿ ಇಂದಿಗೆ 13 ವರ್ಷ ಕಳೆದಿದೆ. ಪುಣ್ಯಸ್ಮರಣೆ ದಿನವಾದ ಇಂದು ರಾಜ್ಯದ ಗಣ್ಯರು ಅವರನ್ನು ನೆನೆಸಿಕೊಳ್ಳುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಬಂದ ಅಭಿಮಾನಿಗಳು ಬೆಂಗಳೂರಿನ ಕೆಂಗೇರಿ ಬಳಿಯಿರುವ ಅಭಿಮಾನಿ ಸ್ಟುಡಿಯೋದ ಅವರ ಸಮಾಧಿಗೆ ನಮನ ಸಲ್ಲಿಸಿದ್ದಾರೆ.
ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಸದಸ್ಯರು ಬನಶಂಕರಿ ದೇವಸ್ಥಾನದಿಂದ ಅಭಿಮಾನಿ ಸ್ಟುಡಿಯೋವರೆಗೆ ಸುಮಾರು ಹದಿನೈದು ಕಿಲೋಮೀಟರ್ ಪಾದಯಾತ್ರೆ ಮೂಲಕ ಪುಣ್ಯಭೂಮಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಐವತ್ತಕ್ಕೂ ಹೆಚ್ಚು ಅಭಿಮಾನಿಗಳು ಅಭಿಮಾನಿ ಸ್ಟುಡಿಯೋವರೆಗೂ ಮೈಸೂರಿನಿಂದ ಪಾದಯಾತ್ರೆ ಕೈಗೊಂಡು ವಿಷ್ಣು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಅನ್ನದಾನ, ರಕ್ತದಾನ: ರಾಜ್ಯದ ಮೂಲೆ ಮೂಲೆಗಳಲ್ಲಿ ಅನ್ನದಾನ ರಕ್ತದಾನಗಳಂತಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಷ್ಣುವರ್ಧನ್ ಅವರನ್ನು ಸ್ಮರಿಸಿದ್ದಾರೆ. ಡಾ. ವಿಷ್ಣುವರ್ಧನ್ ಮತ್ತು ಅವರ ಕುಚುಕು ಗೆಳೆಯ ಡಾ. ಅಂಬರೀಶ್ ಇಬ್ಬರಿಗೂ ಹೆಸರು ಮತ್ತು ಕೀರ್ತಿ ತಂದುಕೊಟ್ಟು ಚಿತ್ರರಂಗದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದ ನಾಗರಹಾವು ಚಿತ್ರ ಬಿಡುಗಡೆಯಾಗಿ ಈ ಹೊತ್ತಿಗೆ 50 ವರ್ಷಗಳಾಗಿವೆ.
Advertisement