ಕವಿತಾ ಲಂಕೇಶ್ ನಿರ್ದೇಶನದ ‘ಗೌರಿ’ ಸಾಕ್ಷ್ಯ ಚಿತ್ರಕ್ಕೆ ಬೆಸ್ಟ್‌ ಹ್ಯೂಮನ್‌ ರೈಟ್ಸ್‌ ಚಿತ್ರ ಪ್ರಶಸ್ತಿ

ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್‌ ಅವರ ಜೀವನವನ್ನು ಆಧರಿಸಿ ಕವಿತಾ ಲಂಕೇಶ್‌ ಅವರು ನಿರ್ದೇಶಿಸಿರುವ ಸಾಕ್ಷ್ಯಚಿತ್ರ 'ಗೌರಿ' ಅತ್ಯುತ್ತಮ ಮಾನವ ಹಕ್ಕುಗಳ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.
ಗೌರಿ ಲಂಕೇಶ್
ಗೌರಿ ಲಂಕೇಶ್

ಬೆಂಗಳೂರು: ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್‌ ಅವರ ಜೀವನವನ್ನು ಆಧರಿಸಿ ಕವಿತಾ ಲಂಕೇಶ್‌ ಅವರು ನಿರ್ದೇಶಿಸಿರುವ ಸಾಕ್ಷ್ಯಚಿತ್ರ 'ಗೌರಿ' ಅತ್ಯುತ್ತಮ ಮಾನವ ಹಕ್ಕುಗಳ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.

ಪತ್ರಕರ್ತೆ ದಿವಂಗತ ಗೌರಿ ಲಂಕೇಶ್‌ ಅವರ ಕುರಿತ ಸಾಕ್ಷ್ಯಚಿತ್ರ ‘ಗೌರಿ’ಗೆ ಟೊರೆಂಟೊದಲ್ಲಿ ನಡೆದ ಮಹಿಳಾ ಚಲನಚಿತ್ರೋತ್ಸವದಲ್ಲಿ ‘ಬೆಸ್ಟ್‌ ಹ್ಯೂಮನ್‌ ರೈಟ್ಸ್‌’ ಪ್ರಶಸ್ತಿ ಲಭಿಸಿದೆ. ಈ ಸಾಕ್ಷ್ಯಚಿತ್ರವು ಅಂತರರಾಷ್ಟ್ರೀಯ ಮಟ್ಟದ ಹಲವು ಸಿನಿಮಾ ಉತ್ಸವಗಳಿಗೂ ಆಯ್ಕೆಯಾಗಿತ್ತು.  ಗೌರಿ ಸಾಕ್ಷ್ಯಚಿತ್ರವು, ಟೊರೊಂಟೊ ಮಹಿಳಾ ಚಲನಚಿತ್ರೋತ್ಸವ 2022 ರಲ್ಲಿ 'ಅತ್ಯುತ್ತಮ ಮಾನವ ಹಕ್ಕುಗಳು' ಪ್ರಶಸ್ತಿಯನ್ನು ಗೆದ್ದಿದೆ.

ಈ ಸಾಕ್ಷ್ಯಚಿತ್ರವು ಮಾಂಟ್ರಿಯಲ್‌ನ ದಕ್ಷಿಣ ಏಷ್ಯಾದ ಚಲನಚಿತ್ರೋತ್ಸವಕ್ಕೂ ಆಯ್ಕೆಯಾಗಿದೆ ಮತ್ತು ಡಾಕ್ ನ್ಯೂಯಾರ್ಕ್, ಆಂಸ್ಟರ್‌ಡ್ಯಾಮ್‌ನ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರ ಚಲನಚಿತ್ರೋತ್ಸವ, ಸನ್‌ಡಾನ್ಸ್ ಚಲನಚಿತ್ರೋತ್ಸವ ಮತ್ತು ಪ್ರಪಂಚದಾದ್ಯಂತದ ಇತರ ಉತ್ಸವಗಳಲ್ಲಿ ಪರಿಗಣನೆಯಲ್ಲಿದೆ.

ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣ ದೇಶದಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿತ್ತು. ಈ ಸಾಕ್ಷ್ಯಚಿತ್ರವು ಭಾರತದಲ್ಲಿ ಪತ್ರಕರ್ತರು ಪ್ರತಿದಿನ ಎದುರಿಸುತ್ತಿರುವ ಮೌಖಿಕ ಮತ್ತು ದೈಹಿಕ ದಾಳಿಗಳ ವಿಷಯಗಳನ್ನು ತೆರೆದಿಟ್ಟಿದೆ. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ 200ಕ್ಕೂ ಹೆಚ್ಚು ಪತ್ರಕರ್ತರ ಮೇಲೆ ದಾಳಿಗಳಾಗಿವೆ. ಕಳೆದ ದಶಕದಲ್ಲಿ 30ಕ್ಕೂ ಹೆಚ್ಚು ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ.

ಮಾತ್ರವಲ್ಲ, ಗೌರಿ ಲಂಕೇಶ್‌ ಪ್ರಕಟಿಸಿದ ವರದಿಗಳ ಪರಿಣಾಮವಾಗಿ ಅವರು 80ಕ್ಕೂ ಹೆಚ್ಚು ಪ್ರಕರಣಗಳನ್ನು ರಾಜ್ಯದ ವಿವಿಧ ಕೋರ್ಟ್‌ಗಳಲ್ಲಿ ಎದುರಿಸಬೇಕಾಗಿ ಬಂತು. ಇಂಥ ಗಂಭೀರ ವಿಷಯದ ಸುತ್ತ ಸಾಕ್ಷ್ಯಚಿತ್ರ ಸ್ಪಂದಿಸಿದೆ’ ಎಂದಿದ್ದಾರೆ ಚಿತ್ರದ ನಿರ್ದೇಶಕಿ ಕವಿತಾ ಲಂಕೇಶ್‌.

ಆಂಸ್ಟರ್‌ಡ್ಯಾಮ್‌ನ ಫ್ರೀ ಪ್ರೆಸ್ ಅನ್‌ಲಿಮಿಟೆಡ್‌ “ಗೌರಿ” ಸಾಕ್ಷ್ಯಚಿತ್ರವನ್ನು ನಿರ್ಮಾಣಕ್ಕೆ ಕೈಜೋಡಿಸಿದೆ. ಈ ಸಂಸ್ಥೆಯು ತಮ್ಮ ವೃತ್ತಿಪರ ಸೇವೆಯ ಕಾರಣದಿಂದಾಗಿ ಹಿಂಸಾಚಾರಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ಪತ್ರಕರ್ತರ ಸಾಕ್ಷ್ಯಚಿತ್ರಗಳ ಪ್ರಸ್ತಾಪಗಳಿಗೆ ಕರೆ ನೀಡಿತ್ತು. ಸುಮಾರು 300 ಪ್ರಸ್ತಾವನೆಗಳು ಬಂದಿದ್ದವು, ಆ ಪೈಕಿ ನಾಲ್ಕು ಚಿತ್ರಗಳನ್ನು ಫ್ರೀ ಪ್ರೆಸ್‌ ಆಯ್ಕೆ ಮಾಡಿದ್ದು, ಅದರಲ್ಲಿ ‘ಗೌರಿ’ ಅವರ ಕುರಿತ ತಮ್ಮ ಸಾಕ್ಷ್ಯಾಚಿತ್ರವೂ ಒಂದಾಗಿದೆ.

ಸೆಪ್ಟಂಬರ್ 5, 2017 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಗೌರಿ ಲಂಕೇಶ್ ಅವರನ್ನು ಅವರ ಮನೆಯ ಹೊರಗೆ ದಾರುಣವಾಗಿ ಹತ್ಯೆ ಮಾಡಲಾಗಿತ್ತು, ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ ಸರ್ಕಾರ  ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಎಸ್ ಐ ಟಿ ತನಿಖೆಗೆ ವಹಿಸಲಾಗಿತ್ತು, ಪ್ರಕರಣದ ಸಂಬಂಧ 18 ಮಂದಿ ಯನ್ನು ಬಂಧಿಸಲಾಗಿದೆ.

ಗೌರಿ ನನಗೆ ಸಹೋದರಿಗಿಂತಲೂ ಮಿಗಿಲಾದ ಕಾರಣ ಆಕೆಯ ಬಗ್ಗೆ ಚಿತ್ರ ಮಾಡಬೇಕೆ ಅಥವಾ ಬೇಡವೇ ಎಂಬ ನಿರ್ಧಾರ ತೆಗೆದುಕೊಳ್ಳುವುದು ಕಠಿಣ ಸವಾಲಾಗಿತ್ತು ಎಂದು ಕವಿತಾ ಲಂಕೇಶ್ ತಿಳಿಸಿದ್ದಾರೆ. ಗೌರಿ ನನ್ನ ಸ್ನೇಹಿತ, ಮಾರ್ಗದರ್ಶಕಿ ಮತ್ತು ಸೋಲ್ ಕೀಪರ್. ಅವಳು  ನನ್ನ ಬಳಿಯಿಲ್ಲ ಎಂಬುದನ್ನು ನಾನು ಇನ್ನೂ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚಿತ್ರ ಮಾಡುವುದು ಎಂದರೆ ಆ ಆಘಾತಕಾರಿ ನೆನಪುಗಳಿಗೆ ಹಿಂತಿರುಗುವುದು. ಆದರೆ ನ್ಯಾಯ ಮತ್ತು ಜನರ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುವಾಗ ಯಾವುದೇ ಭಯವಿಲ್ಲದ ಈ ಮಹಿಳೆಯ ಕಥೆಯನ್ನು ನಾನು ಹೇಳಬೇಕು ಎಂದು ನಾನು ಭಾವಿಸಿದೆ, ”ಎಂದು ಕವಿತಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com