ಪಾಪಾ ಪಾಂಡು ಸೀಸನ್ 2ರ ಮೂಲಕ ಕಾಮಿಡಿ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದ ಸೌರಭ್ ಕುಲಕರ್ಣಿಗೆ ಮೊದಲ ಬ್ರೇಕ್ ಸಿಕ್ಕಿದ್ದು ಶ್ರೀ ಗುರು ರಾಘವೇಂದ್ರ ಸಿನಿಮಾದ ಬಾಲ ಕಲಾವಿದನಾಗಿ. ಟಿ.ವಿ ನಿರೂಪಕ ಸಂಜೀವ್ ಕುಲಕರ್ಣಿ ಅವರ ಪುತ್ರ ಸೌರಭ್ ಈಗ ಚೊಚ್ಚಲ ನಿರ್ದೇಶನದ ಸಿನಿಮಾ ಮಾಡುತ್ತಿದ್ದಾರೆ.
ಸಿರಿ ಲಂಬೋದರ ವಿವಾಹ (ಎಸ್ಎಲ್ ವಿ) ಮೂಲಕ ಚೊಚ್ಚಲ ನಿರ್ದೇಶನ ಮಾಡುತ್ತಿರುವ ಸೌರಭ್, ಸಿನಿಮಾ ನಿರ್ದೇಶಕನಾಗಲು ಉತ್ತೇಜಿಸಿದ ಸ್ನೇಹಿತರನ್ನು ಸ್ಮರಿಸಿದ್ದು ಈ ಸಿನಿಮಾಗೆ 25 ಮಂದಿ ಹೂಡಿಕೆ ಮಾಡಿದ್ದರ ಬಗ್ಗೆ ವಿವರಿಸಿದ್ದಾರೆ.
ನನ್ನ ಕಾಲೇಜು ದಿನಗಳಲ್ಲಿ 7 ಸದಸ್ಯರ ತಂಡವೊಂದನ್ನು ಮಾಡಿ ಅದಕ್ಕೆ ನಮ್ಮನೆ ಪ್ರೊಡಕ್ಷನ್ಸ್ ಎಂದು ನಾಮಕರಣ ಮಾಡಿದ್ದೆವು. ಅದರಲ್ಲಿ ಕ್ಯಾಮರಾ, ಎಡಿಟಿಂಗ್, ಬರಹ ಹೀಗೆ ಪ್ರತಿಯೊಬ್ಬರೂ ಸಿನಿಮಾಗೆ ಸಂಬಂಧಿಸಿದ ವಿವಿಧ ಜವಾಬ್ದಾರಿಗಳನ್ನಿ ನಿರ್ವಹಿಸುತ್ತಿದ್ದೆವು ಆದರೆ ನಿರ್ದೇಶಕನ ಸ್ಥಾನ ಖಾಲಿ ಇತ್ತು. ಆದನ್ನು ನಾನು ನಿರ್ವಹಿಸಿದ್ದೆ. ಛಾಯಾಗ್ರಾಹಕ ಮನೋಹರ್ ಜೋಶಿ ಅವರ ಮಾಜಿ ಸಹವರ್ತಿ ಕಿಟ್ಟಿ ಕೌಶಿಕ್, ನಿರ್ದೇಶಕನಾಗುವಂತೆ ನನಗೆ ಮೊದಲು ಉತ್ತೇಜಿಸಿದ್ದರು.
5 ಕಿರು ಚಿತ್ರಗಳನ್ನು ಮಾಡಿದ ಬಳಿಕ ನಾನು ಈಗ ಎಸ್ಎಲ್ ವಿ ಸಿನಿಮಾ ಮೂಲಕ ಪೂರ್ಣಪ್ರಮಾಣದ ನಿರ್ದೇಶಕನಾಗಿದ್ದೇನೆ ಎಂದು ಸೌರಭ್ ಹೇಳಿದ್ದಾರೆ.
ಎಸ್ಎಲ್ ವಿ ಚಿತ್ರ ಅಂಜನ್ ಎ ಭಾರಧ್ವಾಜ್, ದಿಶಾ ರಮೇಶ್ ಮುಂತಾದ ಕಲಾವಿದರನ್ನು ಹೊಂದಿದ್ದು ಹಾಸ್ಯದ ಅಂಶಗಳೊಂದಿಗೆ ಕಮರ್ಷಿಯಲ್ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಆಗಿದೆ.
ಇದನ್ನೂ ಓದಿ: 'ಸಿರಿ ಲಂಬೋದರ ವಿವಾಹ' ರಿಲೀಸ್ ಡೇಟ್ ಫಿಕ್ಸ್
ನಿರ್ದೇಶಕನಾಗಿ ಸಂಪೂರ್ಣ ಕಾಮಿಡಿ ಸಿನಿಮಾ ಮಾಡುವುದು ಬೇಡ ಎಂದುಕೊಂಡಿದ್ದೆ. ಆದರೆ ಈ ಸಿನಿಮಾದಲ್ಲಿ ಹಾಸ್ಯಮಯ ಅಂಶಗಳೂ ಇವೆ. ಎಸ್ಎಲ್ ವಿ ಎಲ್ಲಾ ರೀತಿಯ ಜನರಿಗೆ ಪ್ರಮುಖವಾಗಿ ಕುಟುಂಬದೊಂದಿಗೆ ವೀಕ್ಷಿಸಬಹುದಾಗಿರುವ ಸಿನಿಮಾ ಆಗಿದೆ ಎಂದು ಸೌರಭ್ ವಿವರಿಸಿದ್ದಾರೆ.
ಮದುವೆ ಕಾರ್ಯಕ್ರಮ ಹಾಗೂ ಅದರ ತೊಡಕುಗಳ ಸುತ್ತ ಹೆಣೆಯಲಾಗಿರುವ ಕಥಾ ಹಂದರ ಇದಾಗಿದ್ದು, ಇಂಟರ್ವಲ್ ನಂತರದಲ್ಲಿ ಕಥೆಯಲ್ಲಿ ಅನಿರೀಕ್ಷಿತ ಟ್ವಿಸ್ಟ್ ಇರಲಿದ್ದು, ಇದೇ ಚಿತ್ರದ ಹೈಲೈಟ್ ಎನ್ನುತಾರೆ ಸೌರಭ್
ಇದೇ ವೇಳೆ ತಮ್ಮ ತಂದೆ ಸಂಜೀವ್ ಅವರನ್ನೂ ಸ್ಮರಿಸಿರುವ ಸೌರಭ್, ನನ್ನ ತಂದೆ ಸಂಜೀವ್ ಕುಲಕರ್ಣಿ, ನನ್ನ ಐಡಿ ಕಾರ್ಡ್ ಇದ್ದಂತೆ, ಆದರೆ ನಾನು ಕಲಾ ಕ್ಷೇತ್ರದಲ್ಲಿ ಆಡಿಷನ್ಸ್ ನೀಡಿ ಸ್ವಂತ ವ್ಯಕ್ತಿತ್ವ ನಿರ್ಮಿಸಿಕೊಂಡಿದ್ದೇನೆ. ನನ್ನ ತಂದೆ ಖಂಡಿತವಾಗಿಯೂ ನನ್ನ ವೃತ್ತಿ ಜೀವನದ ಪ್ರತಿ ಹಂತದಲ್ಲೂ ಆಶೀರ್ವಾದವಾಗಿದ್ದಾರೆ ಎಂದು ಸೌರಭ್ ಹೇಳಿದ್ದಾರೆ.
ಸಿನಿಮಾಗೆ 25 ಮಂದಿ ನಿರ್ಮಾಪಕರಿರುವ ಬಗ್ಗೆ ಮಾತನಾಡಿರುವ ಸೌರಭ್, ಜನರಿಂದ ನನಗೆ ಸಮಯಕ್ಕೆ ಸರಿಯಾಗಿ ಬೆಂಬಲ ಸಿಕ್ಕಿತು. ನಾನು ಕಿರು ಚಿತ್ರಗಳನ್ನು ಮಾಡಿದ್ದೆ. ಹೂಡಿಕೆ ಮತ್ತು ಲಾಭಗಳು ಸ್ನೇಹಿತರ ನಡುವೆ ಹಂಚಿಕೊಳ್ಳಲಾಗುತ್ತದೆ. ಇದೇ ವ್ಯವಸ್ಥೆಯನ್ನು ನಾನು ಮೊದಲ ಫೀಚರ್ ಸಿನಿಮಾಗೂ ಅನ್ವಯಿಸಿದೆ, ನಟರು, ತಾಂತ್ರಿಕ ವರ್ಗದವರೂ ಸೇರಿ ಹಲವು ಮಂದಿ ಪಾಲುದಾರರು ಹೂಡಿಕೆ ಮಾಡಲು ಮುಂದಾದರು. ಕೊನೆಗೆ ಅದು ತಿರುಪತಿ ಹುಂಡಿಯಂತಾಗಿ, ಒಂದು ರೂಪಾಯಿಯಿಂದ ಹಿಡಿದು ಸಾವಿರ ರೂ,ಗಳವರೆಗೆ ಹೂಡಿಕೆಯನ್ನು ಸ್ವೀಕರಿಸಲು ಮುಂದಾದೆವು ಎಂದು ಹೇಳಿದ್ದಾರೆ.
Advertisement