ರಿಷಬ್ ಶೆಟ್ಟಿ ಭೇಟಿ ಮಾಡುವ ಆಸೆ ಇದೆಯಾ: 'ಕಾಂತಾರ' ಹೀರೋ ಕಡೆಯಿಂದ ಅಭಿಮಾನಿಗಳಿಗೆ ಇಲ್ಲಿದೆ ಸಿಹಿಸುದ್ದಿ
ಬೆಂಗಳೂರು: ಕಾಂತಾರ ಎಂಬ ಅಪ್ಪಟ ಕನ್ನಡ ಸೊಗಡಿನ ಚಿತ್ರ ಮಾಡಿ ಇಡೀ ಭಾರತ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ-ನಟ ರಿಷಬ್ ಶೆಟ್ಟಿ ತಮ್ಮೆಲ್ಲಾ ಈ ಯಶಸ್ಸಿಗೆ ಅಭಿಮಾನಿಗಳು ಕೊಡುತ್ತಿರುವ ಪ್ರೀತಿ, ಹಾರೈಕೆ, ಪ್ರೋತ್ಸಾಹವೇ ಕಾರಣ ಎನ್ನುತ್ತಾರೆ.
ಅಭಿಮಾನಿಗಳು, ಸಿನಿ ಪ್ರೇಕ್ಷಕರು ತಮ್ಮ ನೆಚ್ಚಿನ ನಟ-ನಟಿಯರನ್ನು ಹತ್ತಿರದಿಂದ ನೋಡಬೇಕು, ಒಂದು ವಿಶ್ ಮಾಡಬೇಕು, ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳಬೇಕೆಂದು ಆಸೆ ಇಟ್ಟುಕೊಳ್ಳುವುದು ಸಹಜ. ಕಾಂತಾರ ಚಿತ್ರದ ನಂತರವಂತೂ ರಿಷಬ್ ಶೆಟ್ಟಿಯವರನ್ನು ನೋಡಬೇಕೆಂದು ಅದೆಷ್ಟೋ ಮಂದಿ ಕಾಯುತ್ತಿರಬಹುದು.
ಅದಕ್ಕೊಂದು ಉತ್ತಮ ಅವಕಾಶವನ್ನು ರಿಷಬ್ ಶೆಟ್ಟಿಯವರೇ ಕರುಣಿಸಿದ್ದಾರೆ.ಇದೇ ಜುಲೈ 7ರಂದು ಅವರ ಹುಟ್ಟುಹಬ್ಬ. ತಮ್ಮ ಜನ್ಮದಿನದ ಸಂದರ್ಭದಲ್ಲಿ ಅವರು ಇಂಥದ್ದೊಂದು ಭೇಟಿಗೆ ವೇದಿಕೆ ಸಿದ್ಧಪಡಿಸಿಕೊಂಡಿದ್ದು, ಆ ಮೂಲಕ ಅಭಿಮಾನಿಗಳ ಜತೆ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಳ್ಳಲು ಮುಂದಾಗಿದ್ದಾರೆ. ಈ ಕುರಿತು ರಿಷಬ್ ಶೆಟ್ಟಿಯವರೇ ಖುದ್ದು ವಿಡಿಯೋ ಸಂದೇಶ ಮೂಲಕ ಆಹ್ವಾನ ನೀಡಿದ್ದಾರೆ.
ಕೆರಾಡಿ ಎಂಬ ಸಣ್ಣ ಹಳ್ಳಿಯಿಂದ ಸಿನಿಮಾ ಕನಸು ಕಟ್ಟಿಕೊಂಡು ಬಂದ ನನಗೆ ಇಷ್ಟೊಂದು ಪ್ರೀತಿ ತೋರಿಸಿದ್ದೀರಿ, ಇಲ್ಲಿಯವರೆಗೆ ಕರೆತಂದಿದ್ದೀರಿ. ನೀವು ಇಷ್ಟೆಲ್ಲ ಪ್ರೀತಿ ತೋರಿದಾಗ ಅದನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಗೊತ್ತಾಗಿಲ್ಲ. ಅದರಲ್ಲೂ ‘ಕಾಂತಾರ’ ಚಿತ್ರ ಬಿಡುಗಡೆ ಆದಾಗ ತುಂಬಾ ಜನ ಮನೆ ಹತ್ತಿರ ಬಂದಿದ್ದೀರಿ, ಹೋದಹೋದಲ್ಲಿ ನನ್ನ ಭೇಟಿಗೆ ಕಾದಿದ್ದೀರಿ, ಎಷ್ಟೋ ಜನರನ್ನು ನಾನು ಭೇಟಿ ಆಗಲು ಆಗಿರಲಿಲ್ಲ.
ಅದಕ್ಕೆ ನನ್ನ ಹುಟ್ಟಿದ ದಿನ ಇದೇ ಜುಲೈ 7ರ ಮಧ್ಯಾಹ್ನ 3ಕ್ಕೆ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ನಲ್ಲಿ ನಿಮ್ಮನ್ನು ಭೇಟಿಯಾಗಲು ನಾನು ಕಾಯುತ್ತಿರುತ್ತೇನೆ, ಅಲ್ಲಿಗೆ ನೀವೆಲ್ಲಾ ಬನ್ನಿ ಭೇಟಿಯಾಗೋಣ ಮಾತನಾಡೋಣ ಎನ್ನುವ ಮೂಲಕ ರಿಷಬ್ ಶೆಟ್ಟಿ ತಮ್ಮ ಜನ್ಮದಿನಾಚರಣೆಗೆ ಅಭಿಮಾನಿಗಳೆಲ್ಲರಿಗೆ ಮುಕ್ತ ಆಹ್ವಾನ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ