ಬೆಂಗಳೂರು: ನಟ ಸುದೀಪ್ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿವೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ಭೇಟಿ ಮಾಡಿದ್ದು ಇದಕ್ಕೆ ಪುಷ್ಠಿ ನೀಡುವಂತಿತ್ತು.
ರಾಜಕೀಯ ಪ್ರವೇಶದ ಬಗ್ಗೆ ನಟ ಕಿಚ್ಚ ಸುದೀಪ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ ನಾಯಕರು ಮಾತುಕತೆಗೆ ಬಂದಿದ್ದು ನಿಜ ಎಂದು ಅವರು ಹೇಳಿದ್ದಾರೆ. ಆದರೆ ರಾಜಕೀಯಕ್ಕೆ ಎಂಟ್ರಿ ನೀಡಬೇಕೋ ಬೇಡವೋ ಎಂಬ ಬಗ್ಗೆ ತಾವು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.
ನಾನೊಬ್ಬ ಕಲಾವಿದ. ಹಂಡ್ರೆಡ್ ಪರ್ಸೆಂಟ್ ಮಾತುಕತೆಗೆ ಬಂದಿದ್ದರು. ಇಲ್ಲ ಅಂತ ಹೇಳೋಕೆ ಹೋಗಲ್ಲ. ಇತ್ತೀಚೆಗೆ ಪೊಲಿಟಿಕಲ್ ನಾಯಕರಿಗೆ ನಂಬಿಕೆ ಬಂದಿದೆ. ಡಿಕೆ ಶಿವಕುಮಾರ್, ಸುಧಾಕರ್, ಬಸವರಾಜ ಬೊಮ್ಮಾಯಿ, ರಮ್ಯಾ ಅವರು ನನ್ನ ಸ್ನೇಹಿತರು. ನಾನು ಇನ್ನೂ ನಿರ್ಧಾರ ತಗೊಂಡಿಲ್ಲ. ಎರಡೂ ಕಡೆ ಆಪ್ತರು ಇರುವಾಗ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಆಗುತ್ತದೆ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
‘ಎಮೋಶನ್ಸ್ ಇದೆ. ಅದರ ಜೊತೆ ನಮ್ಮ ನಿರ್ಧಾರವನ್ನು ಸೇರಿಸೋಕೆ ಹೋಗಲ್ಲ. ಸುದೀಪ್ ಅವರು ರಾಜಕೀಯಕ್ಕೆ ಬರೋದು ಬೇಡ ಅಂತ ನಮ್ಮ ಜನರ ತಲೆಯಲ್ಲಿ ಇರಬಹುದು. ಒಳ್ಳೆಯದನ್ನು ಮಾಡೋಕೆ ಪವರ್ ಬೇಕಂತಲೇ ಇಲ್ಲ. ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಸುದೀಪ್ ಹೇಳಿದ್ದಾರೆ.
ಇನ್ನೂ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಗಣ್ಯರಿಗೆ ಏರ್ಪಡಿಸಿದ್ದ ಭೋಜನ ಕೂಟಕ್ಕೆ ತಮಗೆ ಆಹ್ವಾನ ಬಂದಿತ್ತು, ಆದರೆ ನನ್ನ ಅನಾರೋಗ್ಯದ ಕಾರಣ ಹೋಗಲು ಆಗಲಿಲ್ಲ, ಅಂತ ದೊಡ್ಡ ಮನುಷ್ಯರ ಜೊತೆಗೆ ಸೇರುವ ಅವಕಾಶ ವಂಚಿತವಾಗಿದ್ದಕ್ಕೆ ಬೇಸರವಿದೆ ಎಂದರು.
Advertisement