ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ತಮ್ಮ ವಿರುದ್ಧ ವಂಚನೆ ಆರೋಪ ಮಾಡಿರುವ ನಿರ್ಮಾಪಕರಾದ ಎನ್ಎಂ ಕುಮಾರ್ ಹಾಗೂ ಸುರೇಶ್ ವಿರುದ್ಧ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಜೆಎಂಎಫ್ಸಿ ಕೋರ್ಟ್ ಗೆ ಇಂದು ಖುದ್ದಾಗಿ ಆಗಮಿಸಿ ಕಿಚ್ಚ ಸುದೀಪ್ ಅರ್ಜಿ ಹಾಕಿದ್ದು, ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯವು ಆಗಸ್ಟ್ 17ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘಗಳ ಮೇಲೆ ನನಗೆ ಗೌರವವಿದೆ. ಇನ್ನು ವೈಯಕ್ತಿಕ ಹಿತಾಸಕ್ತಿಗೆ ಅವುಗಳನ್ನು ಬಳಸಲಾರೆ. ಹೀಗಾಗಿ ನಾನು ನೇರವಾಗಿ ನ್ಯಾಯಾಲಯಕ್ಕೆ ಬಂದಿದ್ದೇನೆ. ನನ್ನ ವಿರುದ್ಧ ಯಾರೇ ಏನೇ ಆರೋಪ ಮಾಡಿದ್ದರು ನ್ಯಾಯಾಲಯದಿಂದ ಸರಿ ಉತ್ತರ ಸಿಗುತ್ತದೆ ಎಂದರು.
ಆರೋಪಗಳು ಯಾವುದು ಸತ್ಯ? ಯಾವುದು ಸುಳ್ಳು? ಎಂಬುದು ಬಹಿರಂಗವಾಗಬೇಕು. ಯಾರು ಸರಿ ಯಾರು ತಪ್ಪು ಎಂದು ತಿಳಿಯಲು ನ್ಯಾಯಾಲಯಕ್ಕಿಂತ ಸರಿಯಾದ ಸ್ಥಳವಿಲ್ಲ. ಯಾವುದು ಎಲ್ಲಿ ಇತ್ಯರ್ಥ ಆಗಬೇಕೋ ಅಲ್ಲೇ ಇತ್ಯರ್ಥ ಆಗಲಿ ಎಂದರು.
ಸ್ಯಾಂಡಲ್ವುಡ್ನಲ್ಲಿ ಸದ್ಯ ನಟ ಸುದೀಪ್ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿಬರುತ್ತಿವೆ. ಮೊದಲು ನಿರ್ಮಾಪಕ ಎನ್.ಕುಮಾರ್ ಅಡ್ವಾನ್ಸ್ ತಗೊಂಡು ಸಿನಿಮಾ ಮಾಡಲಿಲ್ಲ. ನನ್ನ ಹಣ ವಾಪಸ್ ಕೊಡಿಸಿ ಎಂದು ಮನವಿ ಮಾಡಿದ್ದರು.
Advertisement