ನವದೆಹಲಿ: ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ತೆಲುಗಿನ RRR ಚಿತ್ರದ ನಾಟು-ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಒಲಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟ ಜೂ.ಎನ್ ಟಿಆರ್ 'ಇದು ಕೇವಲ ಆರಂಭ ಎಂದು ನನಗನ್ನಿಸುತ್ತದೆ' ಎಂದು ಹೇಳಿದ್ದಾರೆ.
ಈ ಕುರಿತು ಮೊದಲ ಪ್ರತಿಕ್ರಿಯೆ ನೀಡಿರುವ ನಟ ಜೂ. ಎನ್ ಟಿಆರ್, 'ಇತಿಹಾಸ ನಿರ್ಮಿಸಲಾಗಿದ್ದು, 'RRR' ತಂಡವು ದೇಶಕ್ಕೆ ಕೀರ್ತಿ ತಂದಂತೆ ಅನೇಕ ಭಾರತೀಯರ ಕನಸುಗಳು ಅಂತಿಮವಾಗಿ ನನಸಾಗಿವೆ. ನನ್ನ ಸಂತಸ ವ್ಯಕ್ತಪಡಿಸಲು ನನಗೆ ಪದಗಳೇ ಸಿಗುತ್ತಿಲ್ಲ. ಇದು ಕೇವಲ ಆರ್ಆರ್ಆರ್ಗೆ ಮಾತ್ರವಲ್ಲ, ಒಂದು ದೇಶವಾಗಿ ಭಾರತಕ್ಕೆ ಸಂದ ಜಯವಾಗಿದೆ.
ಇದು ಕೇವಲ ಆರಂಭ ಎಂದು ನಾನು ನಂಬುತ್ತೇನೆ. ಭಾರತೀಯ ಚಿತ್ರರಂಗ ಎಷ್ಟು ದೂರದಲ್ಲಿದೆ ಮತ್ತು ಎಷ್ಟು ದೂರಕ್ಕೆ ಹೋಗಬಹುದು ಎಂಬುದನ್ನು ತೋರಿಸುತ್ತದೆ. ಕೀರವಾಣಿಯವರಿಗೆ ಮತ್ತು ಚಂದ್ರಬೋಸ್ ಅವರಿಗೆ ಅಭಿನಂದನೆಗಳು.ರಾಜಮೌಳಿ ಎಂಬ ಮೇರು ಕಥೆಗಾರ ಮತ್ತು ನಮ್ಮೆಲ್ಲರ ಪ್ರೀತಿಯನ್ನು ಧಾರೆಯೆರೆದ ಪ್ರೇಕ್ಷಕರಿಲ್ಲದೆ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಅತ್ಯುತ್ತಮ ಕಿರುಚಿತ್ರದ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಎಲಿಫೆಂಟ್ ವಿಸ್ಪರರ್ಸ್' ತಂಡವನ್ನು ನಾನು ಅಭಿನಂದಿಸುತ್ತೇನೆ ಎಂದ ಜೂ.ಎನ್ ಟಿಆರ್, 'ಇಂದು ಅವರ ಗೆಲುವಿನ ಮೇಲೆ ಭಾರತಕ್ಕೆ ಮತ್ತೊಂದು ಆಸ್ಕರ್ ಪ್ರಶಸ್ತಿಯನ್ನು ತಂದಿದೆ ಎಂದರು.
'ನಾಟು ನಾಟು' ರಿಹಾನ್ನಾ ಮತ್ತು ಲೇಡಿ ಗಾಗಾ ಅವರಂತಹ ದೊಡ್ಡ ಹೆಸರುಗಳ ಪೈಪೋಟಿ ಎದುರಿಸಿ ಪ್ರಶಸ್ತಿ ಗೆದ್ದಿದೆ. ತಂಡದ ಪರವಾಗಿ ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ಹಾಗೂ ಸಾಹಿತಿ ಚಂದ್ರಬೋಸ್ ಪ್ರಶಸ್ತಿ ಸ್ವೀಕರಿಸಿದರು. ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಮತ್ತು ಸಂಗೀತ ಸಂಯೋಜಕರ ಜೊತೆಗೆ ನಿರ್ದೇಶಕ ಎಸ್ಎಸ್ ರಾಜಮೌಳಿ ಮತ್ತು ಪ್ರಮುಖ ನಟರಾದ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ತೇಜ ಸಮಾರಂಭದಲ್ಲಿ ಉಪಸ್ಥಿತರಿದ್ದರು.
Advertisement