
ಕಾಪಿರೈಟ್ ಉಲ್ಲಂಘನೆ ಆರೋಪದಡಿ ನಟ ರಕ್ಷಿತ್ಶೆಟ್ಟಿ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಎರಡು ಚಿತ್ರದ ಹಾಡುಗಳನ್ನು ಅನುಮತಿ ಇಲ್ಲದೆ ಬಳಕೆ ಆರೋಪದಡಿಯಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ಸಂಕಷ್ಟ ಎದುರಾಗಿದೆ.
ನ್ಯಾಯ ಎಲ್ಲಿದೆ ಮತ್ತು ಗಾಳಿ ಮಾತು ಎಂಬ 2 ಚಿತ್ರದ ಹಾಡುಗಳನ್ನು ಅನುಮತಿ ಇಲ್ಲದೆ ಬಳಕೆ ಮಾಡಿದ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.
ನವೀನ್ ಕುಮಾರ್ ಎಂಬುವವರು ರಕ್ಷಿತ್ ಶೆಟ್ಟಿ ದೂರು ದಾಖಲು ಮಾಡಿದ್ದಾರೆನ್ನಲಾಗಿದೆ. ನವೀನ್ ಕುಮಾರ್ ಅವರು ಎಂಆರ್ಟಿ ಮ್ಯೂಸಿಕ್ನ ಪಾಲುದಾರಿಕೆ ಹೊಂದಿದ್ದಾರೆ. ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಬಳಕೆ ಆದ ‘ನ್ಯಾಯ ಎಲ್ಲಿದೆ..’ ಹಾಗೂ ‘ಗಾಳಿಮಾತು..’ ಚಿತ್ರದ ಹಾಡುಗಳನ್ನು ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ಯಲ್ಲಿ ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
2024ರ ಜನವರಿಯಲ್ಲಿ ಚಿತ್ರದ ಹಾಡು ಬಳಕೆ ಬಗ್ಗೆ ರಕ್ಷಿತ್ ಶೆಟ್ಟಿ ಅವರ ಜೊತೆ ಮಾತುಕತೆ ಆಗಿತ್ತು. ಆದರೆ, ಚಿತ್ರದ ಹಾಡು ಬಳಕೆ ಬಗ್ಗೆ ಮಾತುಕತೆ ಸರಿ ಹೊಂದಿರಲಿಲ್ಲ. ಹೀಗಾಗಿ, ಮಾತುಕತೆ ಮುಂದುವರಿಯಲಿಲ್ಲ. 2024ರ ಮಾರ್ಚ್ನಲ್ಲಿ ಬ್ಯಾಚುಲರ್ ಪಾರ್ಟಿ ಚಿತ್ರ ರಿಲೀಸ್ ಆಗಿತ್ತು. ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಗಮನಿಸಿದಾಗ 2 ಚಿತ್ರಗಳ ಹಾಡು ಬಳಕೆ ಆಗಿತ್ತು. ಹಕ್ಕುಸ್ವಾಮ್ಯ, ಪ್ರಸಾರದ ಹಕ್ಕನ್ನು ಖರೀದಿಸದೆ ಹಾಡುಗಳ ಬಳಕೆ ಮಾಡಲಾಗಿದೆ ಎಂದು ನವೀನ್ ಆರೋಪಿಸಿದ್ದಾರೆ.
ಇದೀಗ ಪರಮ್ವಾ ಸ್ಟುಡಿಯೋಸ್ ಹಾಗೂ ನಟ ರಕ್ಷಿತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ದೂರು ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ನಟ ರಕ್ಷಿತ್ ಶೆಟ್ಟಿಗೆ ಯಶವಂತಪುರ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಮೌಖಿಕವಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ
Advertisement