'ಯಾವುದೇ ಕಾರಣಕ್ಕೂ ದರ್ಶನ್ ಬಿಟ್ಟು ಕೊಡಬೇಡ ಕಂದ ಎಂದಿದ್ದರು ಅಮ್ಮ; ನಾನು ಈ ಸ್ಥಿತಿಯಲ್ಲಿ ನೋಡಬೇಕಿತ್ತಾ?'
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರದಲ್ಲಿ ವಿನೋದ್ ರಾಜ್ ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ವಿನೋದ್ ರಾಜ್ ಕೆಲವೊಮ್ಮೆ ನಡೆಯಬಾರದು ನಡೆದು ಹೋಗುತ್ತೆ ಎಂದು ನೋವಿನಿಂದ ನುಡಿದಿದ್ದಾರೆ.
ದರ್ಶನ್ಗೆ ಮೂಗಿನ ತುದಿಯಲ್ಲಿ ಕೋಪ ಇದೆ. ಈಗ ದರ್ಶನ್ಗೆ ಅಗ್ನಿ ಪರೀಕ್ಷೆ ಅಷ್ಟೇ. ನಮ್ಮ ತಾಯಿಗೆ ದರ್ಶನ್ ಮೇಲೆ ತುಂಬಾ ಪ್ರೀತಿ ಇತ್ತು. ಆಗ ಮಂಚದಲ್ಲಿ ಮಲಗಿದ್ದಾಗಲೂ ದರ್ಶನ್ ಬಗ್ಗೆಯೇ ಅಮ್ಮ ಮಾತನಾಡುತ್ತಿದ್ದರು. ತೂಗುದೀಪ್ ಮಗ ಬಿಟ್ಟು ಕೊಡಬೇಡ ಅಂತಿದ್ದರು. ಯಾಕೆ ಈ ರೀತಿ ಘಟನೆ ಆಯಿತು ಅನ್ನಿಸುತ್ತಿದೆ. ಅಚಾತುರ್ಯ ಅಂತಾ ಅಷ್ಟೇ ಹೇಳ್ತೀನಿ ಎಂದು ವಿನೋದ್ ರಾಜ್ ಮಾತನಾಡಿದ್ದಾರೆ. ನಮ್ಮ ತಾಯಿ ಜೊತೆ ದರ್ಶನ್ ತಂದೆ ತೂಗುದೀಪ್ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ತಾಯಿಯ ಆರೋಗ್ಯ ಸರಿ ಇಲ್ಲದಾಗ ಬಂದು ನನ್ನ ತಾಯಿಯನ್ನು ದರ್ಶನ್ ಮಾತನಾಡಿಸಿದ್ದರು. ಕಳೆದ ಬಾರಿ ನನಗೆ ಸರ್ಜರಿಗೆ ಮುನ್ನ ನಾನು ಮತ್ತು ದರ್ಶನ್ ಭೇಟಿಯಾಗಿದ್ದೆವು. ನಂತರ ದರ್ಶನ್ ತೋಟದ ಮನೆಗೆ ಹೋಗಿ ಕೆಲ ಗಿಡಗಳನ್ನು ಹಾಕಿ ಬರೋಣ ಅಂತ ಅನ್ಕೊಂಡಿದ್ವಿ. ಅಷ್ಟರಲ್ಲಿ ನಾನು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೆ. ಆದರಿಂದ ಮೀಟ್ ಮಾಡೋಕೆ ಆಗಿರಲಿಲ್ಲ. ದರ್ಶನ್ 2ನೇ ಬಾರಿ ಜೈಲಿಗೆ ಹೋಗಿರೋದು ಈಗ ಮತ್ತೆ ಯಾಕಾಯಿತು ಎಂದು ನಮಗೆ ಜೀರ್ಣಿಸಿಕೊಳ್ಳೋಕೆ ಆಗುತ್ತಿಲ್ಲ ಎಂದು ವಿನೋದ್ ರಾಜ್ ಮಾತನಾಡಿದ್ದಾರೆ.
ಅವರನ್ನ ನಾನು ಈ ಸ್ಥಿತಿಯಲ್ಲಿ ನೋಡಬೇಕಿತ್ತಾ ಅನ್ನಿಸುತ್ತಿದೆ. ನನ್ನ ಕಣ್ಣುಗಳನ್ನೇ ನಾನು ನಂಬೋಕೆ ಆಗಲಿಲ್ಲ. ಆದರೂ ನಂಬಬೇಕಾದ ಅನಿವಾರ್ಯತೆ ಆಗೋಯ್ತು. ಕಣ್ಣೀರು ಬಿಟ್ಟರೆ ಇನ್ನೇನೂ ಗೊತ್ತಿಲ್ಲ. ಎಲ್ಲಾ ಅಭಿಮಾನಿಗಳು ಸಹ ಕಣ್ಣೀರು ಹಾಕುತ್ತಿದ್ದಾರೆ. ಇದು ಬಹಳ ನೋವಿನ ಸಂಗತಿ. ಒಳ್ಳೆಯ ತೀರ್ಪು ಬಂದು ದರ್ಶನ್ ಅವರು ಇದರಿಂದ ಹೊರಬರಲಿ. ಅವರ ಸಂಸಾರ ಹಾಗೂ ಅಭಿಮಾನಿಗಳ ಜೊತೆಗೆ ಸೇರಿಕೊಳ್ಳಲಿ. ತಲೆಯೆತ್ತಿ ನಡೆಯುವಂತಹ ದರ್ಶನ್ ಆಗಲಿ.. ಎಲ್ಲರಿಗೂ ದರ್ಶನ ಕೊಡಲಿ ಅಂತ ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿ ಭಾವುಕರಾದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ