ಸ್ಯಾಂಡಲ್ವುಡ್ನಲ್ಲಿ ಇತ್ತೀಚೆಗೆ ಮರ್ಯಾದೆ ಪ್ರಶ್ನೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸೆಲೆಬ್ರಿಟಿಗಳೆಲ್ಲ ಕೆಲ ವಿಷಯಗಳನ್ನು ಹೇಳಿಕೊಂಡು ಮರ್ಯಾದಿ ಪ್ರಶ್ನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಕಡೆಗೂ ಈ ಮರ್ಯಾದೆ ಪ್ರಶ್ನೆ ಹ್ಯಾಷ್ಟ್ಯಾಗ್ಗೆ ಉತ್ತರ ಸಿಕ್ಕಿದೆ.
ಇದೊಂದು ಸಿನಿಮಾ ಟೈಟಲ್ ಆಗಿದ್ದು, ಸಕ್ಕತ್ ಸ್ಡುಡಿಯೋಸ್ ಆರ್ಜೆ ಪ್ರದೀಪ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರಕ್ಕೆ 'ದುಡ್ಡಿರೋರ್ಗೆ ಎಲ್ಲಾ, ದುಡಿಯೋರಿಗೆ ಏನೂ ಇಲ್ಲ' ಎನ್ನುವ ಟ್ಯಾಗ್ಲೈನ್ ನೀಡಲಾಗಿದೆ. ಚಿತ್ರವು ಮಧ್ಯಮ ವರ್ಗದ ಸ್ಟೋರಿ ಆಗಿದ್ದು, ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ಚಿತ್ರತಂಡ ನಿರತವಾಗಿದೆ. ಶೀಘ್ರದಲ್ಲೇ ಚಿತ್ರದ ತಾರಾಬಳಗ ರಿವೀಲ್ ಆಗಲಿದೆ.
ಸಕ್ಕತ್ ಸ್ಟುಡಿಯೋ ಮೂಲಕ ವೆಬ್ ಸೀರೀಸ್ (ಲೂಸ್ ಕನೆಕ್ಷನ್ ಮತ್ತು ಹನಿಮೂನ್) ನಿರ್ಮಾಣ ಮಾಡಿದ್ದ ಆರ್ ಜೆ ಪ್ರದೀಪ ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡಿದ್ದು, ಚಿತ್ರದ ಮೂಲಕ ಸ್ಯಾಂಡಲ್ ವುಡ್'ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ದಿ ಬೆಸ್ಟ್ ಆಕ್ಟರ್ ಎಂಬ 43 ನಿಮಿಷಗಳ ಕಿರುಚಿತ್ರ ನಿರ್ದೇಶಿಸಿದ್ದ ಹಾಗೂ ಪುಕ್ಸಟ್ಟೆ ಲೈಫು ಚಿತ್ರ ನಿರ್ಮಿಸಿದ್ದ ನಾಗರಾಜ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇದು ಮಧ್ಯಮವರ್ಗದವರ ಭಾವನೆಗಳನ್ನು ಹೇಳುವ ಸಿನಿಮಾ. ‘ದುಡ್ಡಿರೋರಿಗೆ ಎಲ್ಲಾ ದುಡಿಯೋರಿಗೆ ಏನೂ ಇಲ್ಲ’ ಎಂಬ ಲೈನ್ ಮೇಲೆ ಸಿನಿಮಾದ ಕಥೆ ಸಾಗಲಿದೆ. ಯಾವಾಗಲೋ ಒಮ್ಮೆ ದುಡ್ಡು ಮಾಡುತ್ತೇವೆ. ಆ ಹೋಪ್ನಲ್ಲೇ ಎಲ್ಲರೂ ಬದುಕುತ್ತಿರುತ್ತೇವೆ. ಆ ಎಮೋಷನ್ ಸಿನಿಮಾದಲ್ಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಚಿತ್ರದ ಚಿತ್ರೀಕರಣ ಬೆಂಗಳೂರು ಹಾಗೂ ಚಾಮರಾಜಪೇಟೆ ಸುತ್ತಮುತ್ತ ನಡೆಸಲಾಗಿದೆ. ಚಿತ್ರವು ನೈಜ ವಿಧಾನವನ್ನು ಅಳವಡಿಸಿಕೊಂಡಿದೆ, ಥ್ರಿಲ್ಲರ್ ಅಂಶಗಳೊಂದಿಗೆ ಚಿತ್ರಕಥೆ ಸಾಗಲಿದೆ. ನಿರ್ದೇಶನದ ಜೊತೆಗೆ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದೇನೆ ಎಂದು ನಾಗರಾಜ್ ಹೇಳಿದ್ದಾರೆ.
ಚಿತ್ರಕ್ಕೆ ಸಂದೀಪ್ (ಗೌಳಿ, ಸಕುಟುಂಬ ಸಮೇತ) ಅವರ ಕ್ಯಾಮೆರಾ ಕೈಚಳಕ ತೋರಿಸಿದ್ದು, ಅರ್ಜುನಾ ರಾಮು (ಬ್ಯಾಚುಲರ್ ಪಾರ್ಟಿ) ಅವರು ಸಂಗೀತ ಸಂಯೋಜಿಸಿದ್ದಾರೆ.
Advertisement