ನಟ ಡಾಲಿ ಧನಂಜಯ್ ನಾಯಕ ನಟನಾಗಿ ನಟಿಸುತ್ತಿರುವ 'ಉತ್ತರಕಾಂಡ' ಚಿತ್ರ ಅಪಾರ ನಿರೀಕ್ಷೆ ಹುಟ್ಟಿಸಿದ ಚಿತ್ರವಾಗಿತ್ತು. ಕಾರಣ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಈ ಚಿತ್ರದ ಮೂಲಕ ನಾಯಕಿಯಾಗಿ ಚಂದನವನಕ್ಕೆ ಕಮ್ ಬ್ಯಾಕ್ ಮಾಡುವವರಿದ್ದರು.
ಚಿತ್ರದ ಮುಹೂರ್ತದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ ರಮ್ಯಾ ಸ್ಕ್ರಿಪ್ಟ್ ಬಹಳ ಸೊಗಸಾಗಿದೆ, ಚಿತ್ರತಂಡ ಕೂಡ ಅದ್ಭುತವಾಗಿದೆ, ಚಿಂದಿ ಉಡಾಯಿಸುವುದರಲ್ಲಿ ಸಂಶಯವಿಲ್ಲ ಎಂದಿದ್ದರು. ಹಲವು ವರ್ಷಗಳ ನಂತರ ರಮ್ಯಾ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯನ್ನು ದೊಡ್ಡ ಪರದೆ ಮೇಲೆ ನೋಡುವ ತವಕದಲ್ಲಿದ್ದರು. ಆದರೆ ಈಗ ಅವರಿಗೆಲ್ಲ ನಿರಾಸೆಯಾಗಿದೆ. ರಮ್ಯಾ ಉತ್ತರಾಖಂಡ ಚಿತ್ರದಲ್ಲಿ ಕೂಡ ನಟಿಸುತ್ತಿಲ್ಲ. ಈ ಹಿಂದೆ ಅವರದೇ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ನಲ್ಲಿ ತಯಾರಾದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ಕೂಡ ಆರಂಭದಲ್ಲಿ ನಟಿಸುತ್ತೇನೆ ಎಂದು ಹೇಳಿ ನಂತರ ಹಿಂದೆ ಸರಿದಿದ್ದರು.
ಚುನಾವಣಾ ಪ್ರಚಾರಕ್ಕೆ ಕೂಡ ಅಲಭ್ಯ: ನಿನ್ನೆ ಇನ್ಸ್ಟಾಗ್ರಾಮ್ ಮೂಲಕ ರಮ್ಯಾ ಅವರೇ ಉತ್ತರಾಖಂಡದಲ್ಲಿ ನಟಿಸುತ್ತಿಲ್ಲ. ಡೇಟ್ಸ್ ಹೊಂದಾಣಿಕೆ ಸಮಸ್ಯೆಯಿಂದ ಚಿತ್ರದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ, ಅಲ್ಲದೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಕಾಂಗ್ರೆಸ್ ಪರ ರಮ್ಯಾ ಪ್ರಚಾರ ಮಾಡಲಿದ್ದಾರೆ ಎಂದು ಇತ್ತೀಚೆಗೆ ಕೇಳಿಬರುತ್ತಿದ್ದ ಸುದ್ದಿಗೆ ತೆರೆ ಎಳೆದಿದ್ದಾರೆ.
Advertisement