
ತಿರುವನಂತಪುರಂ: ಮಲಯಾಳಂನ ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ಛಾಯಾಗ್ರಾಹಕ ಶಾಜಿ ಎನ್ ಕರುಣ್ ಅವರ ನಿಧನದಿಂದ ಮಲಯಾಳಂ ಸಿನಿಮಾ ಜಗತ್ತು ಓರ್ವ ದಿಗ್ಗಜ ನಿರ್ದೇಶಕನನ್ನು ಕಳೆದುಕೊಂಡಿದೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಪಿರವಿ (1988), ಸ್ವಾಹಂ (1994), ವಾನಪ್ರಸ್ಥಂ (1999), ಮತ್ತು ಕುಟ್ಟಿ ಸ್ರ್ಯಾಂಕ್ (2009) ಚಿತ್ರಗಳ ನಿರ್ದೇಶನದಿಂದ ಅವರು ಹೆಚ್ಚು ಪ್ರಸಿದ್ಧಿಯಾಗಿದ್ದರು. ಅವರ ಚೊಚ್ಚಲ ಚಿತ್ರ ಪಿರವಿಯ ಅತ್ಯುತ್ತಮ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿತ್ತು. ಮತ್ತು 1989 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಮನ್ನಣೆ ಪಡೆದಿತ್ತು.
ಸ್ವಾಹಂ ಕೇನ್ಸ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಭಾರತದ ಎರಡನೇ ಸಿನಿಮಾವಾಗಿತ್ತು. ವಾನಪ್ರಸ್ಥಂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಗಳಿಸಿತ್ತು. ನಿಧನದ ವೇಳೆ ಅವರು ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
1952 ರಲ್ಲಿ ಕೊಲ್ಲಂನಲ್ಲಿ ಜನಿಸಿದ ಶಾಜಿ, ಸಾಂಸ್ಕೃತಿಕ ಶ್ರೀಮಂತಿಕೆಯ ಮನೆತನದಲ್ಲಿ ಬೆಳೆದರು. ಅವರ ತಂದೆ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಸಾಹಿತ್ಯ ಮತ್ತು ಶಾಸ್ತ್ರೀಯ ಕಲೆಗಳ ಮೇಲೆ ವಿಶೇಷ ಒಲವು ಬೆಳೆಸಿದ್ದರು. ಅವರು ಪತ್ನಿ ಅನಸೂಯಾ ವಾರಿಯರ್ ಮತ್ತು ಪುತ್ರರಾದ ಅನಿಲ್ ಮತ್ತು ಅಪ್ಪು ಅವರನ್ನು ಅಗಲಿದ್ದಾರೆ.
ಶಾಜಿ ಎನ್ ಕರುಣ್ ಅವರಿಗೆ ಸಂದ ಪ್ರಶಸ್ತಿ ಮತ್ತು ಗೌರವಗಳು:
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಪಿರವಿ (1988)
ಕ್ಯಾಮೆರಾ ಡಿ'ಓರ್ – ಕೇನ್ಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಮನ್ನಣೆ: (ಪಿರವಿ (1989)
ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಸ್ವಾಹಮ್ (1994)
ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ವಾನಪ್ರಸ್ಥಂ (1999)
ಕೇನ್ಸ್, ಲಂಡನ್ ಮತ್ತು ಲೊಕಾರ್ನೊ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪಿರವಿ ಮತ್ತು ಸ್ವಾಹಂ ವ್ಯಾಪಕವಾಗಿ ಪ್ರದರ್ಶಿಸಲ್ಪಟ್ಟಿದ್ದವು.
ಪದ್ಮಶ್ರೀ ಪ್ರಶಸ್ತಿ - ಭಾರತ ಸರ್ಕಾರ (2011)
ಚೆವಲಿಯರ್ ಆಫ್ ದಿ ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟರ್ಸ್ - ಫ್ರಾನ್ಸ್ ಸರ್ಕಾರ (2019)
Advertisement