
ಪುಟ್ಟ ಗೌರಿ ಮದುವೆ ಮತ್ತು ಕನ್ನಡತಿ ಮುಂತಾದ ಕನ್ನಡ ಧಾರಾವಾಹಿಗಳ ಮೂಲಕ ಪ್ರೇಕ್ಷಕಕ ಮನಗೆದ್ದಿರುವ ನಟಿ ರಂಜನಿ ರಾಘವನ್ ಅವರು, ನಿರ್ದೇಶಕಿಯಾಗಿ ಹೊಸ ಪಯಣ ಶುರು ಮಾಡುತ್ತಿದ್ದಾರೆ.
ಹೊಸ ವರ್ಷದ ಸಂದರ್ಭದಲ್ಲಿ ಈ ವಿಚಾರವನ್ನು ರಜಿನಿ ರಾಘವನ್ ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಚಿತ್ರದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಜಿನಿ ರಾಘವನ್ ಅವರು, ಹೊಸ ವರ್ಷದ ದಿನ ನನ್ನ ಹೊಸ ಕೆಲಸದ ಬಗ್ಗೆ ಹೇಳಿಕೊಳ್ಳಲು ಭಯ ಉತ್ಸಾಹ ಎರಡೂ ಇದೆ. ಈ ಹಿಂದೆ ಬರವಣಿಗೆ ಮತ್ತು ನಟನೆಯ ಮೂಲಕ ಕಥೆಗಳನ್ನ ತಲುಪಿಸೋ ಪ್ರಯತ್ನ ಮಾಡಿದ್ದೇನೆ. ಈಗ ಮೊದಲ ಬಾರಿಗೆ ಕಥೆಯೊಂದನ್ನ ದೊಡ್ಡ ಪರದೆಯ ಮೇಲೆ ನಿಮಗೆ ತೋರಿಸುವತ್ತ ಕೆಲಸ ನಡೆದಿದೆ. ಹೊಸ ಕೆಲಸ ಅನ್ನುವುದಕ್ಕಿಂತ ಸಿನಿಮಾ ನಿರ್ದೇಶಕಿ ಆಗಬೇಕೆಂಬ ಕನಸು ಹೊತ್ತು ಬಹಳ ವರ್ಷಗಳೇ ಸರಿದಿದೆ,ಈ ಕತೆ ಹುಟ್ಟಿ ಎರಡು ವರ್ಷಗಳಾಗಿವೆ. ಒಂದೂವರೆ ವರ್ಷದಿಂದ ಇದರ ಚಿತ್ರಕತೆಯನ್ನ ಬರೆದು ತಿದ್ದಿದ್ದೇನೆ. ಚಿತ್ರರಂಗದ ಹಲವಾರು ಜನರ ಸಹಾಯ ಪ್ರೋತ್ಸಾಹದಿಂದ, ನಮ್ಮ ನಿರ್ಮಾಪಕರಾದ ಡಾ. ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಅವರ ಸಹಕಾರದಿಂದ ನಮ್ಮ ಸಿನಿಮಾ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ.
ಈ ಪಯಣದಲ್ಲಿ ಮುಖ್ಯವಾಗಿ ನನಗೆ ಶಕ್ತಿಯಾಗಿರುವವರು Maestro ಇಸೈಜ್ಞಾನಿ ಇಳಯರಾಜ ಸರ್. 1000ಕ್ಕೂ ಹೆಚ್ಚು ಚಿತ್ರಕ್ಕೆ ಸಂಗೀತ ನೀಡಿರುವವರು ನನ್ನ ಕತೆಯನ್ನ ಮೆಚ್ಚಿ ಜೊತೆಗೆ ನಿಂತಿದ್ದಾರೆ. ಸೆಪ್ಟೆಂಬರ್ ಹದಿಮೂರು 2023 ರಂದು ಅವರನ್ನ ಭೇಟಿ ಆಗಿ ಕತೆ ಹೇಳುವ ಅದೃಷ್ಟ ಸಿಕ್ಕಾಗ “ಚೆನ್ನೈಗೆ ಹೋಗಿ ಅವರನ್ನ ಭೇಟಿ ಆಗಿ, ಕಾಲಿಗೆ ಬಿದ್ದು ಒಂದು ಫೋಟೋ ತೆಗೆಸಿಕೊಂಡು ಬಂದ್ರೆ ಅದೇ ದೊಡ್ಡದು ಅಂತಷ್ಟೇ ಅಂದುಕೊಂಡಿದ್ದು. ಕನ್ನಡದಲ್ಲಿ ಕಥೆ ಹೇಳಮ್ಮ, ಕನ್ನಡ ನನಗೆ ಚೆನ್ನಾಗಿ ಬರುತ್ತೆ ಕೊಲ್ಲೂರು ಮೂಕಾಂಬಿಕೆ ನನ್ನವ್ವ ಎಂದು ಮಾತು ಶುರು ಮಾಡಿದವರು ಮೂರೇ ದಿನದಲ್ಲಿ ಕಥೆ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ ಎಂದು ತಿಳಿಸಿ ನಮ್ಮ ಸಿನಿಮಾದ ಭಾಗವಾಗಿ, ಇವತ್ತಿಗೆ ಇಳಯರಾಜ ಸರ್ ನಮಗೆ “ಒನ್ ಕಾಲ್ ಅವೇ” ಅನ್ನೋ ಜಂಭ ಹುಟ್ಟಿಸಿದ್ದಾರೆ.
ಹೋದ ವರ್ಷ 2024 ಜನವರಿ ಒಂದು ನನ್ನ ಹೊಸ ಕನಸಿನ ಬಗ್ಗೆ ಪೋಸ್ಟ್ ಹಾಕಿದ್ದರೂ ಅದೇನೆಂದು ಹೇಳಲು 2025 ಬರಬೇಕಾಯಿತು. ಸಿನಿಮಾ ಮಾಡುವಾಗ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ ಅನ್ನುವುದು ಇಲ್ಲಿಯ ತನಕ ಕಲಿತ ಪಾಠವಾದರೂ ಒಳ್ಳೆಯ ಸಿನಿಮಾ ಆಗಲು ಅದಕ್ಕೇನು ಬೇಕೋ ಅದೇ ಪಡೆದುಕೊಳ್ಳುತ್ತದೆ ಅನ್ನೋ ನಂಬಿಕೆಯೂ ಅಚಲವಾಗಿದೆ. ಕನ್ನಡಿಗರ ಅಶೀರ್ವಾದ, ಸಹಕಾರವನ್ನ ಬೇಡುತ್ತಾ ಮುನ್ನಡೆಯುತ್ತಿದ್ದೇನೆಂದು ಹೇಳಿದ್ದಾರೆ.
ಚಿತ್ರಕ್ಕೆ ಸಂಗೀತ ನೀಡುವ ಕೆಲಸ ಈಗಾಗಲೇ ಆರಂಭವಾಗಿದ್ದು, ರಜಿನಿಯವರು ನಿಯಮಿತವಾಗಿ ಚೆನ್ನೈ ಭೇಟಿ ನೀಡುತ್ತಿದ್ದಾರೆಂದು ತಿಳಿದುಬಂದಿದೆ.
ಬೆಳಿಗ್ಗೆ 7.30ಕ್ಕೆ ಕೆಲಸ ಆರಂಭವಾಗುತ್ತದೆ. ನಾನು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದಿದ್ದು, ಇದು ಸಂಗೀತ ಸಂಯೋಜನೆ ವೇಳೆ ಸಂಗೀತದ ಜಟಿಲತೆಗಳನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡುತ್ತಿದೆ ಎಂದು ರಜನಿಯವರು ಹೇಳಿದ್ದಾರೆ.
ಕನ್ನಡತಿ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಚಿತ್ರಕ್ಕೆ ಕಥೆ ಬರೆಯಲು ಆರಂಭಿಸಿದ್ದೆ. ಕೆಲ ನಿರ್ದೇಶಕರನ್ನೂ ಸಂಪರ್ಕಿಸಿದ್ದೆ. ಆದರೆ, ನನ್ನ ಕಥೆಯನ್ನು ನಿರ್ದೇಶಿಸಲು ಯಾರೂ ಮುಂದೆ ಬರಲಿಲ್ಲ. ನಂತರ ಯೋಗರಾಜ್ ಭಟ್ ಅವರು ನನ್ನನ್ನೇ ನಿರ್ದೇಶನ ಮಾಡುವಂತೆ ಪ್ರೋತ್ಸಾಹಿಸಿದರು. ಅಭಿಮಾನಿಗಳಿಂದಲೂ ಆತ್ಮವಿಶ್ವಾಸ ಸಿಕ್ಕಿತು. ನಂತರ ನಿರ್ದೇಶನ ಮಾಡಬಲ್ಲೆ ಎಂಬ ಆತ್ಮವಿಶ್ವಾಸವೂ ಬೆಳೆಯಿತು. ಕನಸು ನನಸಾಗಿಸಿಕೊಳ್ಳಲು ಕುಟುಂಬ ಸದಸ್ಯರೂ ಪ್ರೋತ್ಸಾಹ ನೀಡಿದರು.
ಚಿತ್ರವನ್ನು ಹೊರತರಲು ದೊಡ್ಡ ಪ್ರೊಡಕ್ಷನ್ ಬ್ಯಾನರ್ಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ. ಭಾವನಾತ್ಮಕ ಮತ್ತು ಸಾಮಾಜಿಕ ವಿಷಯಗಳನ್ನು ಅನ್ವೇಷಿಸುವ ಹಾಗೂ ಕೌಟುಂಬಿಕ ಚಿತ್ರ ಇದಾಗಿದೆ ಎಂದು ತಿಳಿಸಿದ್ದಾರೆ.
Advertisement