
ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ರ ಹೊಸ ಸಿನಿಮಾ ‘ಕಲ್ಟ್’ಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ.
ಈ ಹಿಂದೆ ಚಿತ್ರೀಕರಣದ ವೇಳೆ ದುಬಾರಿ ಡ್ರೋನ್ ಮುರಿದು, ಡ್ರೋನ್ ಮಾಲೀಕ ಆತ್ಮಹತ್ಯೆಗೆ ಮುಂದಾಗಿ ದೊಡ್ಡ ವಿವಾದವೇ ಆಗಿತ್ತು. ಇದೀಗ ಇದೇ ಸಿನಿಮಾಕ್ಕೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ.
ಕಳೆದ ಕೆಲ ದಿನಗಳಿಂದ ಕಲ್ಟ್ ಚಿತ್ರ ತಂಡವು ಹಂಪಿ ಸೇರಿದಂತೆ ನಾನಾ ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ. ಅದೇ ರೀತಿಯಾಗಿ ತಾಲೂಕಿನ ರಂಗಾಪೂರ, ಸಣಾಪೂರ ಕೆರೆ ಭಾಗದಲ್ಲಿ ಚಿತ್ರೀಕರಣಕ್ಕೆ ಸೆಟ್ ಹಾಕಿತ್ತು.
ಅನುಮತಿ ಇಲ್ಲದೆ ಸಣಾಪೂರ ಗ್ರಾಮದ ತುಂಗಭದ್ರಾ ನದಿ ದಡದಲ್ಲಿ ಬೆಂಕಿ ಹಚ್ಚಿ ಚಿತ್ರೀಕರಣ ನಡೆಸಲು ಮುಂದಾಗಿದ್ದು, ಈ ವೇಳೆ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಚಿತ್ರೀಕರಣಕ್ಕೆ ತಡೆ ನೀಡಿದ್ದಾರೆಂದು ತಿಳಿದುಬಂದಿದೆ.
ಅನುಮತಿ ಪಡೆದ ನಂತರ ಚಿತ್ರೀಕರಣ ಮಾಡಲು ಅವಕಾಶ ನೀಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಕಲ್ಟ್ ಚಿತ್ರ ತಂಡಕ್ಕೆ ಸೂಚನೆಯನ್ನು ನೀಡಿದ್ದಾರೆಂದು ವರದಿಗಳು ತಿಳಿಸಿವೆ.
ಅರಣ್ಯ ಪ್ರದೇಶದಲ್ಲಿ ಸಿನಿಮಾ, ಸಾಕ್ಷ್ಯಚಿತ್ರ, ಧಾರಾವಾಹಿ ಸೇರಿದಂತೆ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
Advertisement