
ಬೆಂಗಳೂರು: ಯುದ್ಧ ಮಾಡಿದೆ ಸಾಯುವುದು ನಮ್ಮ ಸೈನಿಕರೇ, ಹೀಗಾಗಿ, ನಾನೆಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ ಎಂದು ನಟಿ ರಮ್ಯಾ ಅವರು ಹೇಳಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ವೈಯುಕ್ತಿಕವಾಗಿ ನಾನು ಹಿಂಸೆಯನ್ನು ಬೆಂಬಲಿಸುವುದಿಲ್ಲ, ಯುದ್ಧ ಅಂತೀವಲ್ಲ, ಯುದ್ಧ ಮಾಡುವುದರಿಂದ ಯಾರಿಗಾದರೂ ಒಳಿತಾಗುತ್ತಾ? ಇದರಿಂದ ಯಾರೂ ಉದ್ದಾರ ಆಗಲ್ಲ. ಎಲ್ಲದ್ದಕ್ಕೂ ಯುದ್ಧವೇ ಉತ್ತರ ಅಲ್ಲ, ಯುದ್ಧ ಶುರುವಾದರೆ ನಮ್ಮ ಸೈನಿಕರೇ ಸಾಯೋದು' ಎಂದು ಹೇಳಿದ್ದಾರೆ.
ನಾವು ನಮ್ಮ ನಾಯಕರನ್ನು ಆಯ್ಕೆ ಮಾಡಿ ಕಳಿಸೋದು ನಮ್ಮ ರಕ್ಷಣೆ ಮಾಡಲಿ ಅಂತ ಅಲ್ವಾ? ಹೀಗಿರುವಾಗ ರಕ್ಷಣೆ ನೀಡದೆ ಯುದ್ಧ ಅಂದರೆ ಬಲಿಯಾಗೋದು ಅಮಾಯಕರಲ್ವಾ ಎಂದು ಪ್ರಶ್ನಿಸಿದ್ದಾರೆ.
ಪಹಲ್ಗಾಮ್ ಘಟನೆಗೆ ಸಂಬಂಧಿಸಿ ಇಂಟೆಲಿಜೆನ್ಸ್ನ ವೈಫಲ್ಯ, ರಕ್ಷಣಾ ಲೋಪ ಪ್ರಶ್ನೆ ಮಾಡಲೇಬೇಕು. ಗಡಿಭಾಗದಂಥಾ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಭದ್ರತೆ ಇರಲೇಬೇಕಲ್ವಾ ಈ ಲೋಪ ಯಾಕೆ ಆಯ್ತು ಅನ್ನುವುದನ್ನು ಅವಲೋಕಿಸಬೇಕು.
ಹಿಂದೆ ಉಪೇಂದ್ರ ಜೊತೆಗಿನ ಸಿನಿಮಾವೊಂದರ ಶೂಟಿಂಗ್ಗಾಗಿ ಪಹಲ್ಗಾಂಗೆ ಹೋಗಿ ಬಂದಿದ್ದೇನೆ. ಆಗ ಫುಲ್ ಸೆಕ್ಯುರಿಟಿ ಕೊಟ್ಟಿದ್ದರು. ಆದರೆ, ಜನಸಾಮಾನ್ಯರಿಗೂ ರಕ್ಷಣೆ ಬೇಕು. ರಕ್ಷಣೆ ಬಗ್ಗೆ ಚಿಂತಿಸಬೇಕೇ ಹೊರತು ಯುದ್ಧದ ಬಗ್ಗೆ ಅಲ್ಲ ಎಂದು ತಿಳಿಸಿದ್ದಾರೆ.
Advertisement