
ಚೆನ್ನೈ: ಭಾರತದಲ್ಲಿ ವಾಸಿಸುತ್ತಿದ್ದರೂ ಪಾಕಿಸ್ತಾನದ ಬಗ್ಗೆ ಸಹಾನುಭೂತಿ ಹೊಂದಿರುವವರು ಸಹ ಭಯೋತ್ಪಾದಕರು ಎಂದು ಕನ್ನಡದ ಜನಪ್ರಿಯ ನಟ ಧ್ರುವ ಸರ್ಜಾ ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ನೆಲೆಗಳನ್ನು ನಾಶಮಾಡಲು ಭಾರತೀಯ ಸಶಸ್ತ್ರ ಪಡೆಗಳು 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯನ್ನು ಆರಂಭಿಸಿದ್ದು, 'ಭಾರತದಲ್ಲಿ ವಾಸಿಸುತ್ತಾ ಪಾಕಿಸ್ತಾನದ ಬಗ್ಗೆ ಸಹಾನುಭೂತಿ ಹೊಂದಿರುವ ಎಲ್ಲರೂ ಉಗ್ರರು. ನೀವು ಅವರ ಬಗ್ಗೆ ಸಹಾನುಭೂತಿ ಹೊಂದಿದ್ದರೆ, ನೀವು ಸಹ ಭಯೋತ್ಪಾದಕರು' ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
'ನೀವು ಭಾರತದ ದ್ರೋಹಿಗಳಾಗಬೇಡಿ. ಭಾರತದಲ್ಲಿ ಇರುವುದು ಎಂದರೆ ಭಾರತವನ್ನು ನಂಬುವುದು ಎಂದರ್ಥ. ನೀವು ವಾಸಿಸುವ ದೇಶವನ್ನು ಪ್ರೀತಿಸಿ, ಇಲ್ಲದಿದ್ದರೆ ಶೀಘ್ರದಲ್ಲೇ ನಾವು ನಿಮ್ಮನ್ನು ಭಾರತದಿಂದ ಹೊರಹಾಕುತ್ತೇವೆ. ಜೈ ಹಿಂದ್' ಎಂದು ಅವರು ಬರೆದಿದ್ದಾರೆ.
ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ನಡೆಸಿದ ಭೀಕರ ದಾಳಿಯಲ್ಲಿ 26 ಪ್ರವಾಸಿಗರು ಸಾವಿಗೀಡಾಗಿದ್ದು, ಧ್ರುವ ಸರ್ಜಾ ಅವರು ಆಗಲೂ ಮೊದಲು ಪ್ರತಿಕ್ರಿಯಿಸಿದ್ದರು.
'ಭಾರತದ ಕಲಶದಂತಿರುವ ಜಮ್ಮು ಮತ್ತು ಕಾಶ್ಮೀರ ಯಾವಾಗಲೂ ನಮ್ಮದಾಗಿರುತ್ತದೆ. ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ಕೃತ್ಯಗಳನ್ನು ಯಾರೂ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ಎಲ್ಲ ಧರ್ಮಗಳ ಸಾರ ಪ್ರೀತಿ ಮತ್ತು ಅಹಿಂಸೆ. ಪ್ರೀತಿಯಿಂದ ಸಾಧಿಸಲಾಗದದನ್ನು ಹಿಂಸೆ ಮತ್ತು ದ್ವೇಷದಿಂದ ಸಾಧಿಸಲಾಗುವುದಿಲ್ಲ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಮೃತರ ಕುಟುಂಬಗಳಿಗೆ ಧೈರ್ಯ ನೀಡಲಿ. ಜೈ ಹಿಂದ್. ಜೈ ಭಾರತ್. ಜೈ ಆಂಜನೇಯ' ಎಂದು ಹೇಳಿದ್ದರು.
ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯ ನಂತರ ಭಾರತೀಯ ಸೇನೆಯು ಬಲವಾದ ಪ್ರತಿಕ್ರಿಯೆ ನೀಡಿದ್ದು, ಆಪರೇಷನ್ ಸಿಂಧೂರವನ್ನು ಪ್ರಾರಂಭಿಸಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿಕ ಕಾಶ್ಮೀರದಲ್ಲಿನ ಭಯೋತ್ಪಾದಕರ ಒಂಬತ್ತು ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿರುವ ಭಾರತೀಯ ಸೇನೆಯು, ಯಾವುದೇ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿಲ್ಲ ಮತ್ತು ಗುರಿಗಳ ಆಯ್ಕೆ ಮತ್ತು ವಿಧಾನದಲ್ಲಿ ಭಾರತ ಗಣನೀಯ ಸಂಯಮವನ್ನು ಪ್ರದರ್ಶಿಸಿದೆ ಎಂದಿದೆ.
Advertisement