
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಶ್ರೀಧರ್ ನಾಯಕ್ ನಿಧನ ರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಆರ್ಥಿಕ ಸಹಾಯ ಮಾಡುವಂತೆ ಅನೇಕರಲ್ಲಿ ಮನವಿ ಮಾಡಿದ್ದರು. ಗುರುತೇ ಸಿಗದಷ್ಟು ಬದಲಾಗಿದ್ದನ್ನು ನೋಡಿ ಹಲವರಿಗೆ ಶಾಕ್ ಆಗಿತ್ತು. ಈಗ ಶ್ರೀಧರ್ ಅವರು ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅವರ ಕಳೆಬರಹವನ್ನು ಇಡಲಾಗಿದೆ. ಅವರಿಗೆ 47 ವರ್ಷ ವಯಸ್ಸಾಗಿತ್ತು.
ಜೀ ಕನ್ನಡದ 'ಪಾರು' ಧಾರಾವಾಹಿ, ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಅಂತಹ ಸಿನಿಮಾದಲ್ಲಿ ನಟಿಸಿದ್ದ ಶ್ರೀಧರ್ ನಾಯಕ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಿರುತೆರೆ ಹಾಗೂ ಸಿನಿಮಾ ಎರಡರಲ್ಲೂ ನಟಿಸಿದ್ದ ಶ್ರೀಧರ್ ನಾಯಕ್ ಆರ್ಥಿಕ ಪರಿಸ್ಥಿತಿ ಕೂಡ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ ನೆರವನ್ನು ಕೋರಿದ್ದರು. ಕಿರುತೆರೆ ತಾರೆಯರು ಹಾಗೂ ಜನರು ಇವರ ಪರಿಸ್ಥಿತಿಯನ್ನು ನೋಡಿ ನೆರವನ್ನು ನೀಡಿದ್ದರು.
ಕೋವಿಡ್ ಸಂದರ್ಭದಲ್ಲಿ ಶ್ರೀಧರ್ ನಾಯಕ್ ಅವರಿಗೆ ಕೆಲಸವಿಲ್ಲದೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ಇನ್ನೊಂದು ಕಡೆ ಕೌಟುಂಬಿಕ ಸಮಸ್ಯೆ ಕೂಡ ಇತ್ತು. ಆ ವೇಳೆ ಕೆಲಸ ಗಿಟ್ಟಿಸಿಕೊಳ್ಳುವುದಕ್ಕೆ ಶ್ರೀಧರ್ ನಾಯಕ್ ಪರದಾಡಿದ್ದರು. ಚಿಕ್ಕ ಪುಟ್ಟ ಕೆಲಸ ಸಿಗುತ್ತಿತ್ತು. ಜೊತೆಗೆ ದೊಡ್ಡ ಪಾತ್ರಗಳೇನು ಸಿಗುತ್ತಿರಲಿಲ್ಲ. ಹೀಗಾಗಿ ಮನೆ ಬಾಡಿಗೆ ಕಟ್ಟುವುದಕ್ಕೂ ಕಷ್ಟವಾಗುತ್ತಿತ್ತು ಎಂದು ಹೇಳಿಕೊಂಡಿದ್ದರು. ಊಟ ಸರಿಯಾಗಿ ಮಾಡದೆ ದೇಹದಲ್ಲಿ ವಿಟಮಿನ್ ಹಾಗೂ ಪ್ರೋಟಿನ್ ಕಡಿಮೆಯಾಗಿತ್ತು. ಇದರಿಂದ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಹೋಯ್ತು ಎಂದು ಸ್ವತ: ಶ್ರೀಧರ್ ನಾಯಕ್ ಹೇಳಿಕೊಂಡಿದ್ದರು.
Advertisement