

ರಾಕಿಂಗ್ ಸ್ಟಾರ್ ಯಶ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ “ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ಅಪ್ಸ್” ಬಗ್ಗೆ ಹಾಲಿವುಡ್ ಮಟ್ಟದಲ್ಲಿ ಮೊದಲ ಪ್ರಚಾರಾತ್ಮಕ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಹೊಸ ಮಾಹಿತಿಯನ್ನು ಅವರು ಹಂಚಿಕೊಂಡಿದ್ದು, ಇದು ಸಾಮಾನ್ಯ ಆಕ್ಷನ್-ಗ್ಯಾಂಗ್ಸ್ಟರ್ ಸಿನಿಮಾ ಅಲ್ಲ ಎಂದು ಹೇಳಿಕೊಂಡಿದ್ದಾರೆ.
ಲಾಸ್ ಏಂಜಲೀಸ್ನಲ್ಲಿ ನಡೆದ CinemaCon 2026 ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ತಮ್ಮ ಮುಂದಿನ ಬಿಡುಗಡೆ ಚಿತ್ರಗಳಾದ ಟಾಕ್ಸಿಕ್ ಮತ್ತು ರಾಮಾಯಣ ಬಗ್ಗೆ ಮಾತನಾಡಿದ್ದಾರೆ.
Fandangoಗೆ ನೀಡಿದ ಸಂದರ್ಶನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ನಟ ಯಶ್ “ಟಾಕ್ಸಿಕ್” ಚಿತ್ರವನ್ನು ಪದರಗಳಿಂದ ಕೂಡಿದ (layered) ಚಿತ್ರವೆಂದು ವಿವರಿಸಿದ್ದಾರೆ. ಹೊರಗೆ ನೋಡಲು ಇದು ಸಾಮಾನ್ಯ ಆಕ್ಷನ್ ಸಿನಿಮಾ ಅನ್ನಿಸಬಹುದು, ಆದರೆ ಇದರೊಳಗೆ ಆಳವಾದ ಮನೋವಿಜ್ಞಾನ ಮತ್ತು ಸಂಕೀರ್ಣತೆಯಿದೆ ಎಂದು ಹೇಳಿದ್ದಾರೆ.
ಟಾಕ್ಸಿಕ್ ಚಿತ್ರದ ಬಗ್ಗೆ ಏನೆಂದರು?
ಟಾಕ್ಸಿಕ್ ಒಂದು ಬಹಳ ಮಹತ್ವಾಕಾಂಕ್ಷೆಯ ಚಿತ್ರ. ಮೊದಲ ಬಾರಿಗೆ ನಾವು ಈ ಸಿನಿಮಾವನ್ನು ಇಂಗ್ಲಿಷ್ನಲ್ಲಿಯೂ ಶೂಟ್ ಮಾಡಿದ್ದೇವೆ. ಈ ಚಿತ್ರವು ಸಾಮಾನ್ಯ ಗ್ಯಾಂಗ್ಸ್ಟರ್ ಕಥೆಯಲ್ಲ. ಮೇಲ್ಮೈಯಲ್ಲಿ ಇದು ಆಕ್ಷನ್ ಸಿನಿಮಾವಂತೆ ಕಾಣಬಹುದು, ಆದರೆ ಇದರಲ್ಲಿರುವ ಮನೋವಿಜ್ಞಾನ ಮತ್ತು ಮಾನವ ಜೀವನದ ಅಂಶಗಳು ತುಂಬಾ ಆಳವಾದವು ಎಂದು ಯಶ್ ಹೇಳಿದರು.
‘ಟಾಕ್ಸಿಕ್’ ಸಿನಿಮಾ ಒಂದು ಡಾರ್ಕ್ ಅಥವಾ ಋಣಾತ್ಮಕ ಪಾತ್ರವನ್ನು ಬಹಳ ಭಿನ್ನ ರೀತಿಯಲ್ಲಿ ಪ್ರೆಸೆಂಟ್ ಮಾಡುವ ಸಿನಿಮಾ. ಕೆಲವು ಅದ್ಭುತವಾದ ತಂತ್ರಜ್ಞರು ಆ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ನನ್ನ ನಿರ್ದೇಶಕಿ ಗೀತು ಮೋಹನ್ದಾಸ್, ಗ್ಯಾಂಗ್ಸ್ಟರ್ ಸಿನಿಮಾವನ್ನು ಸಂಪೂರ್ಣ ಭಿನ್ನ ದೃಷ್ಟಿಕೋನದಿಂದ ಕಟ್ಟಿಕೊಟ್ಟಿದ್ದಾರೆ. ನಾನಂತೂ ಆ ಸಿನಿಮಾನಲ್ಲಿ ನಟಿಸುವುದನ್ನು ಎಂಜಾಯ್ ಮಾಡಿದ್ದೇನೆ. ಸಿನಿಮಾ ಕಣ್ಣಿಗೆ ಹಬ್ಬವೇ ಆಗಲಿದೆ. ಜೊತೆಗೆ ಸಿನಿಮಾ ನೋಡುವ ಪ್ರೇಕ್ಷಕರ ಮನಸ್ಸಿನ ಮೇಲೂ ಸಹ ಗಾಢ ಪರಿಣಾಮವನ್ನು ಆ ಸಿನಿಮಾ ಬೀರಲಿದೆ’ ಎಂದಿದ್ದಾರೆ ಯಶ್.
KGF ಖ್ಯಾತಿಯ ಯಶ್, ಭಾರತೀಯ ಸಿನೆಮಾದ ಬದಲಾವಣೆಯ ಕುರಿತು ಮಾತನಾಡಿ, ಭಾರತ ಒಂದು ವಿಶ್ವದಂತಿದೆ – ಕೆಲವು ಕಿಲೋಮೀಟರ್ಗಳಿಗೊಮ್ಮೆ ಭಾಷೆ ಮತ್ತು ಸಂಸ್ಕೃತಿ ಬದಲಾಗುತ್ತದೆ. ಡಬ್ಬಿಂಗ್ ಮತ್ತು ಪ್ಯಾನ್-ಇಂಡಿಯಾ ಕಥೆಗಳ ಮೂಲಕ ವಿವಿಧ ಪ್ರದೇಶಗಳ ಪ್ರೇಕ್ಷಕರನ್ನು ಸಂಪರ್ಕಿಸಲು ಸಿನಿಮಾ ಮೂಲಕ ಸಾಧ್ಯವಾಗಿದೆ ಎಂದರು.
ಈ ಹಿನ್ನೆಲೆಯಲ್ಲೇ “ಟಾಕ್ಸಿಕ್” ಚಿತ್ರ, “ಇದು ಭಾರತೀಯ ಭಾವನೆಗಳನ್ನಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರಿಗೆ ತಲುಪುವ ಚಿತ್ರ,” ಎಂದು ಹೇಳಿದರು.
CinemaCon 2026ನಲ್ಲಿ ಯಶ್, ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ “ರಾಮಾಯಣ” ಚಿತ್ರವನ್ನು ಅಂತಾರಾಷ್ಟ್ರೀಯ ಪ್ರೇಕ್ಷಕರಿಗೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ ರಾಮಾಯಣದ ರಾಮನ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾದ ನಂತರ ಇದು ಎರಡನೇ ದೊಡ್ಡ ಅಂತಾರಾಷ್ಟ್ರೀಯ ಪ್ರಚಾರ ಕಾರ್ಯಕ್ರಮವಾಗಿದೆ.
“ರಾಮಾಯಣ” ಚಿತ್ರದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ರವಿ ದುಬೆ ಲಕ್ಷ್ಮಣನಾಗಿ ಅಭಿನಯಿಸಿದ್ದಾರೆ. ದಂಗಲ್ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದಲ್ಲಿ, DNEG ಕಂಪನಿಯ ಅತ್ಯಾಧುನಿಕ VFX ಬಳಸಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಈ ವರ್ಷದ ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
Advertisement