

ಇದೇ ದೀಪಾವಳಿಯಂದು ಬಿಡುಗಡೆಗೆ ಸಜ್ಜಾಗಿರುವ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ: ಭಾಗ 1' (Ramayana: Part One) ಸಿನಿಮಾ ಇದೀಗ ಹೊಸ ವಿವಾದವೊಂದಕ್ಕೆ ಸಿಲುಕಿದೆ.
ಸಿನಿಮಾ ಬಿಡುಗಡೆಗೂ ಮುನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ದೃಶ್ಯಗಳು ಅಥವಾ ಸಂಭಾಷಣೆಗಳಿಲ್ಲ ಎಂಬುದರ ಖಚಿತತೆಗಾಗಿ ತಮ್ಮ ಸಂಘಟನೆಯ ಪ್ರತಿನಿಧಿಗಳಿಗಾಗಿ ವಿಶೇಷ ಪ್ರದರ್ಶನವೊಂದನ್ನು ಏರ್ಪಡಿಸುವಂತೆ 'ಶ್ರೀ ರಾಮಲೀಲಾ ಮಹಾಸಂಘ'ವು ಚಿತ್ರತಂಡವನ್ನು ಒತ್ತಾಯಿಸಿದೆ. ತಮ್ಮ ಮನವಿಯನ್ನು ಪರಿಗಣಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದೆ.
ಭಾರತ ಮತ್ತು ವಿದೇಶಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮುನ್ನ 'ರಾಮಾಯಣ: ಭಾಗ 1'ರ ವಿಶೇಷ ಪ್ರದರ್ಶನವನ್ನು ಏರ್ಪಡಿಸುವಂತೆ ಕೋರಿ, ಶ್ರೀ ರಾಮಲೀಲಾ ಮಹಾಸಂಘದ ಅಧ್ಯಕ್ಷ ಅರ್ಜುನ್ ಕುಮಾರ್ ಅವರು ನಿರ್ದೇಶಕ ನಿತೇಶ್ ತಿವಾರಿ ಮತ್ತು ಚಿತ್ರ ನಿರ್ಮಾಣ ಸಂಸ್ಥೆಗೆ ಅಧಿಕೃತ ಪತ್ರ ಬರೆದಿದ್ದಾರೆ.
ಸಿನಿಮಾ ಪ್ರೇಕ್ಷಕರನ್ನು ತಲುಪುವ ಮುನ್ನವೇ ಯಾವುದೇ ಆಕ್ಷೇಪಾರ್ಹ ವಿಷಯಗಳಿದ್ದರೆ ಅವುಗಳನ್ನು ಗುರುತಿಸಲು ಅನುಕೂಲವಾಗುವಂತೆ ದೆಹಲಿಯ ಮಹಾಸಂಘದ ಸದಸ್ಯರು, ರಾಮಲೀಲಾ ಸಮಿತಿಗಳು ಮತ್ತು ಹಿಂದೂ ಸಂಘಟನೆಗಳಿಗಾಗಿ ಈ ಪ್ರದರ್ಶನವನ್ನು ಏರ್ಪಡಿಸಬೇಕು ಎಂದು ಕುಮಾರ್ ಒತ್ತಾಯಿಸಿದ್ದಾರೆ.
2023ರಲ್ಲಿ ಬಿಡುಗಡೆಯಾದ 'ಆದಿಪುರುಷ್' (Adipurush) ಸಿನಿಮಾಗೂ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಇತ್ತೀಚಿಗೆ ಬಿಡುಗಡೆ ರಾಮಾಯಾಣ 1 ಸಿನಿಮಾದ ಟ್ರೇಲರ್ ನಲ್ಲಿ ರಣಬೀರ್ ಕಪೂರ್ ಪಾತ್ರವನ್ನು ವೀಕ್ ಆಗಿ ತೋರಿಸಲಾಗಿದೆ. ಆ ಪಾತ್ರಕ್ಕೆ ಇರಬೇಕಾದ ಗಾಂಭೀರ್ಯವನ್ನೂ ಅದು ಹೊಂದಿಲ್ಲ. ಸಿನಿಮಾದಲ್ಲಿ ಹಲವು ಸೀನ್ ಗಳಲ್ಲಿ ಹಿಂದೂಗಳಿಗೆ ಧಕ್ಕೆ ತರುವಂತಹ ಅಂಶಗಳಿವೆ ಎಂದು ತಿಳಿದುಬಂದಿದೆ. ಹೀಗಾಗಿ ಆಕ್ಷೇಪಾರ್ಹ ಸನ್ನಿವೇಶಗಳು ಅಥವಾ ಸಂಭಾಷಣೆಯನ್ನು ಪತ್ತೆ ಹಚ್ಚಲು ವಿಶೇಷ ಪ್ರದರ್ಶನ ಆಯೋಜಿಸಬೇಕಾಗಿದೆ ಎಂದು ಮನವಿ ಮಾಡಲಾಗಿದೆ.
ಒಂದು ವೇಳೆ ಮನವಿಯನ್ನು ಪರಿಗಣಿಸದಿದ್ದಲ್ಲಿ, ರಾಮಲೀಲಾ ಮಹಾಸಂಘ ವಿವಿಧ ಹಿಂದೂ ಸಂಘಟನೆಗಳ ಜೊತೆಗೆ ದೆಹಲಿ ಮತ್ತಿತರ ಕಡೆಗಳ ಚಿತ್ರಮಂದಿರಗಳ ಹೊರಗೆ ಪ್ರತಿಭಟನೆ, ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.