

ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸಂಗೀತ ರಿಯಾಲಿಟಿ ಶೋ ʻಸರಿಗಮಪ ಲಿಟಲ್ ಚಾಂಪ್ಸ್ʼ ಫಿನಾಲೆಗೆ ಅದ್ದೂರಿಯಾಗಿ ತೆರೆ ಬಿದ್ದಿದ್ದು, ಮಂಗಳೂರಿನ ಇಬ್ಬರೂ ಪ್ರತಿಭಾವಂತ ಬಾಲಕರು ವಿನ್ನರ್ ಮತ್ತು ಮೊದಲ ರನ್ನರ್ ಅಪ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಮಂಗಳೂರಿನ ಅಶ್ಮಿತ್ ಈ ಬಾರಿಯ ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಗಾಯಕಿ ಇಂದು ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಬೆಳೆದ ಅಶ್ಮಿತ್ಗೆ ವಿಜೇತ ಟ್ರೋಫಿಯೊಂದಿಗೆ ಬರೋಬ್ಬರಿ 20 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗಿದೆ.
ಗಾಯನದ ಜೊತೆಗೆ ವಯೊಲಿನ್ ವಾದನದಲ್ಲೂ ಅದ್ಭುತ ಪ್ರತಿಭೆ ಮೆರೆದ ಅಶ್ಮಿತ್, ಫಿನಾಲೆಯಲ್ಲಿ ಎದುರಾದ ಕಠಿಣ ಪೈಪೋಟಿಯನ್ನು ಮೆಟ್ಟಿ ನಿಂತು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇನ್ನೂ ಅಶ್ಮಿತ್ಗೆ ತೀವ್ರ ಪೈಪೋಟಿ ನೀಡಿದ ಮಂಗಳೂರಿನ ಮತ್ತೊಬ್ಬ ಪ್ರತಿಭೆ, ಅಂಚಿತ್ಯ ರೈ ಮೊದಲ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ. ರೋಚಕವಾಗಿ ನಡೆದ ಅಂತಿಮ ಹಣಾಹಣಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ ಅಚಿಂತ್ಯ ಅವರಿಗೆ ಟ್ರೋಫಿ ಹಾಗೂ 15 ಲಕ್ಷ ರೂಪಾಯಿ ನಗದು ಬಹುಮಾನ ಲಭಿಸಿದೆ. ಈ ಮೂಲಕ ಈ ಬಾರಿಯ ಸರಿಗಮಪ ಫಿನಾಲೆಯಲ್ಲಿ ಮಂಗಳೂರಿಗೆ ʻಡಬಲ್ ಧಮಾಕʼ ಸಿಕ್ಕಂತಾಗಿದೆ.
ಎರಡು ಹಂತಗಳಲ್ಲಿ ನಡೆದ ಈ ಮಹಾಸಂಗ್ರಮದ ಅಂತಿಮ ಸುತ್ತಿಗೆ ಒಟ್ಟು 6 ಬಾಲಪ್ರತಿಭೆಗಳು ಅರ್ಹತೆ ಪಡೆದಿದ್ದರು. ‘ಸರಿಗಮಪ ಲಿಟಲ್ ಚಾಂಪ್ಸ್’ನಲ್ಲಿ ಫಿನಾಲೆ ತಲುಪಿದ್ದ ಈ ಆರು ಸ್ಪರ್ಧಿಗಳೂ ತಮ್ಮದೇ ಆದ ವಿಶೇಷ ಪ್ರತಿಭೆಯಿಂದ ಗಮನ ಸೆಳೆದಿದ್ದರು.