

ನವದೆಹಲಿ: ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಹಾಗೂ ಶಿಕ್ಷಣತಜ್ಞ ಮತ್ತು ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚೂಕ್ ಅವರ ನಡೆಸುತ್ತಿರುವ "ಪ್ರತಿಭಟನೆ"ಗೆ ಬಾಲಿವುಡ್ ತಾರೆಯರಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ.
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ನಂತರ ಇದೀಗ ನಟ ರಿತೇಶ್ ದೇಶಮುಖ್ ಹಾಗೂ ನಟಿ ಜೆನೆಲಿಯಾ ಅವರು ಸಹ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
"ದೇಶದ ಯುವಕರೊಂದಿಗೆ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ" ಎಂದು ತಾರಾ ದಂಪತಿ ಹೇಳಿದ್ದಾರೆ.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಸೋಮವಾರ ಸಾವಿರಾರು ವಿದ್ಯಾರ್ಥಿಗಳು ಸಂಸತ್ ಚಲೋ ನಡೆಸಿದರು.
ಪರಿಸ್ಥಿತಿಯನ್ನು ನಿಯಂತ್ರಿಸಲು, ಅಧಿಕಾರಿಗಳು ಬಲಪ್ರಯೋಗ ಮಾಡಿದ್ದು, ಹಲವು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಸಹ ನಡೆಸಿದ್ದರು.
"ನಮ್ಮ ದೇಶದ ಯುವಕರೊಂದಿಗೆ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ" ಎಂಬ ಟಿಪ್ಪಣಿಯನ್ನು ರಿತೇಶ್ ದೇಶಮುಖ್ ಹಂಚಿಕೊಂಡಿದ್ದು, ಜೋರಾಗಿ, ಸ್ಪಷ್ಟವಾಗಿ ಮತ್ತು ಭಯವಿಲ್ಲದೆ ಪ್ರತಿಭಟಿಸುತ್ತಿರುವ ಯುವಕರ ಸಮಸ್ಯೆಗಳನ್ನು ಆಲಿಸಬೇಕು. ಅವರು ನಮ್ಮ ಪ್ರಜಾಪ್ರಭುತ್ವದ ಹೃದಯ ಬಡಿತ ಮತ್ತು ನಮ್ಮ ರಾಷ್ಟ್ರದ ಭವಿಷ್ಯದ ನಿಜವಾದ ವಾಸ್ತುಶಿಲ್ಪಿಗಳು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
"ನಾವು ಅವರ ಸಮಸ್ಯೆ ಆಲಿಸೋಣ, ಬೆಂಬಲಿಸೋಣ ಮತ್ತು ಸಬಲೀಕರಣಗೊಳಿಸೋಣ. ನಮ್ಮ ಯುವಜನರ ಶಕ್ತಿ, ಧೈರ್ಯ ಮತ್ತು ಕನಸುಗಳು ನಾವು ನಿರ್ಮಿಸಲು ಬಯಸುವ ಭಾರತವನ್ನು ರೂಪಿಸುತ್ತವೆ. ಜೈ ಹಿಂದ್. ಜೆನೆಲಿಯಾ ಮತ್ತು ರಿತೇಶ್ ದೇಶಮುಖ್," ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿಗಷ್ಟೇ ಈ ಹೋರಾಟಕ್ಕೆ ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಬಹಿರಂಗವಾಗಿ ಬೆಂಬಲ ಸೂಚಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರ ವಿಡಿಯೋ ಸಖತ್ ವೈರಲ್ ಆಗಿತ್ತು. ಸೋನಾಕ್ಷಿ ಸಿನ್ಹಾ ತಮ್ಮ ವಿಡಿಯೋ ಸಂದೇಶದಲ್ಲಿ ಸರ್ಕಾರದ ನಡೆ ಹಾಗೂ ದೇಶದ ಜನರ ಮೌನವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ಎರಡು ವಾರಗಳಿಗೂ ಹೆಚ್ಚು ಕಾಲದಿಂದ ಸೋನಮ್ ವಾಂಗ್ಚುಕ್ ಅನ್ನ-ನೀರಿಲ್ಲದೆ ಹೋರಾಡುತ್ತಿರುವುದನ್ನು ನೋಡಿ ತಮಗೆ ತಡೆಯಲಾಗದೆ ಮಾತನಾಡುತ್ತಿರುವುದಾಗಿ ಅವರು ಹೇಳಿದ್ದರು.