

ತಮಿಳಿನ ಖ್ಯಾತ ನಟ, ಟಿವಿಕೆ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಅವರ ವೈಯಕ್ತಿಕ ಜೀವನವು ಇತ್ತೀಚೆಗೆ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ. ಅವರ ಪತ್ನಿ ಸಂಗೀತ ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ತಮಿಳು ನಾಡು ವಿಧಾನಸಭೆ ಚುನಾವಣೆಯ ಪ್ರಚಾರದ ನಡುವೆ ವಿಜಯ್ ವೈಯಕ್ತಿಕ ಜೀವನ ಭಾರೀ ಸುದ್ದಿಯಾಗಿದೆ.
ತಮಿಳು ನಾಡಿನ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ಅವರ ಪತ್ನಿ ಸಂಗೀತಾ ವಿಚ್ಛೇದನ ಅರ್ಜಿ ಸಲ್ಲಿಸಿದ ಕೇವಲ ಒಂದೇ ವಾರದಲ್ಲಿ ವಿಜಯ್ ನಿನ್ನೆ ಸಂಜೆ ಚೆನ್ನೈಯಲ್ಲಿ ಮದುವೆ ಕಾರ್ಯಕ್ರಮದಲ್ಲಿ ನಟಿ ತ್ರಿಷಾ ಕೃಷ್ಣನ್ ಜೊತೆಗೆ ಹಾಜರಾಗಿ ಸುದ್ದಿ ಮಾಡಿದ್ದಾರೆ. ವಿಜಯ್ ಮತ್ತು ತ್ರಿಷಾ ಮಧ್ಯೆ ಕೇಳಿಬರುತ್ತಿರುವ ಗಾಸಿಪ್ ಗಳಿಗೆ ಇದು ಮತ್ತಷ್ಟು ಪುಷ್ಠಿ ನೀಡಿದೆ.
ಚಿತ್ರ ನಿರ್ಮಾಪಕ ಕಲ್ಪತಿ ಎಸ್. ಸುರೇಶ್ ಮತ್ತು ಮೀನಾಕ್ಷಿ ಸುರೇಶ್ ಅವರ ಮಗನ ಮದುವೆ ಸಮಾರಂಭಕ್ಕೆ ಇಬ್ಬರೂ ಒಟ್ಟಿಗೆ ಆಗಮಿಸಿದ್ದು ಅಲ್ಲಿದ್ದ ಅತಿಥಿಗಳು ಮತ್ತು ಅಭಿಮಾನಿಗಳ ಗಮನ ಸೆಳೆಯಿತು. ವಿಜಯ್ ಸಾಂಪ್ರದಾಯಿಕವಾಗಿ ಕ್ರೀಮ್ ಮತ್ತು ಚಿನ್ನದ ಬಣ್ಣದ ಶರ್ಟ್ ಮತ್ತು ಧೋತಿ ಧರಿಸಿ ಹೂಗುಚ್ಛ ಹಿಡಿದು ಕಾರ್ಯಕ್ರಮಕ್ಕೆ ಬಂದರೆ ಅವರ ಜೊತೆಯೇ ನಟಿ ತ್ರಿಷಾ ಸೊಗಸಾದ ಅದೇ ಬಣ್ಣದ ಸೀರೆ ಧರಿಸಿ ಮುಗುಳ್ನಗುತ್ತಾ ಸೌಮ್ಯವಾಗಿ ಅವರ ಹಿಂದೆ ಹೆಜ್ಜೆ ಹಾಕುತ್ತಾ ಬಂದರು. ಒಮ್ಮೆಲೇ ಅಲ್ಲಿದ್ದ ಅಷ್ಟೂ ಜನರು ಇಬ್ಬರನ್ನೂ ಅಚ್ಚರಿಯಿಂದ ನೋಡಿ ಫೋಟೋ-ವಿಡಿಯೊ ತೆಗೆಯಲು ಆರಂಭಿಸಿದರು.
ಕೆಲವೇ ಕ್ಷಣಗಳಲ್ಲಿ ಸೋಷಿಯಲ್ ಮೀಡಿಯಾ ತುಂಬ ಇಬ್ಬರ ಫೋಟೋ-ವಿಡಿಯೊ ವೈರಲ್ ಆಗಿ ಸೆನ್ಸೇಷನ್ ಹುಟ್ಟಿಸಿದರು.
ಸಂಗೀತಾ ಸಲ್ಲಿಸಿದ ವಿಚ್ಛೇದನ ಅರ್ಜಿಯಲ್ಲಿ, 2021ರಿಂದ ವಿಜಯ್ ಒಬ್ಬ ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ನಿರಂತರ ಮಾನಸಿಕ ಹಿಂಸೆ, ನಿರ್ಲಕ್ಷ್ಯ ಹಾಗೂ ಪರೋಕ್ಷವಾಗಿ ತಮ್ಮನ್ನು ತ್ಯಜಿಸಿರುವಂತಹ ವರ್ತನೆಯಿಂದ ತಾನು ಹಾಗೂ ತಮ್ಮ ಮಕ್ಕಳಿಗೆ ಮಾನಸಿಕ ವೇದನೆ ಮತ್ತು ಅವಮಾನ ಉಂಟಾಗಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ANI ಸುದ್ದಿಸಂಸ್ಥೆ ವರದಿ ಪ್ರಕಾರ, ವಿಜಯ್ ಆ ನಟಿಯೊಂದಿಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮತ್ತು ವಿದೇಶ ಪ್ರವಾಸಗಳಿಗೆ ಹೋಗುವುದನ್ನು ಮುಂದುವರಿಸಿದ್ದಾರೆ ಎಂದು ಸಂಗೀತ ಅರ್ಜಿಯಲ್ಲಿ ವಿವರಿಸಲಾಗಿದೆ. ಜೊತೆಗೆ, ಆ ನಟಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಜೊತೆಗಿನ ಚಿತ್ರಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಿದ್ದರೂ, ವಿಜಯ್ ಅದನ್ನು ನಿರಾಕರಿಸಿಲ್ಲ ಅಥವಾ ವಿರೋಧ ವ್ಯಕ್ತಪಡಿಸಿಲ್ಲ ಎಂದು ಹೇಳಲಾಗಿದೆ. ತಮ್ಮ ಮತ್ತು ವಿಜಯ್ ನಡುವಿನ ವಿವಾಹ ರದ್ದುಪಡಿಸುವಂತೆ, ಶಾಶ್ವತ ಪಾಲನಾ ಧನ ಮತ್ತು ತಮಗೆ ವಾಸಿಸಲು ಮನೆ ನೀಡುವಂತೆ ಬೇಡಿಕೆ ಮಾಡಿದ್ದಾರೆ.
ವಿಜಯ್ ಮತ್ತು ತ್ರಿಷಾ ಒಟ್ಟಿಗೆ ಕಾಣಿಸಿಕೊಂಡಿರುವುದು ಇಬ್ಬರ ನಡುವಿನ ಹಳೆಯ ವದಂತಿಗಳನ್ನು ಮತ್ತೆ ಜೀವಂತಗೊಳಿಸಿದೆ. ವಿಜಯ್ ಮತ್ತು ತ್ರಿಷಾ ಮೊದಲಿಗೆ 2004ರಲ್ಲಿ ಬಿಡುಗಡೆಯಾದ ಘಿಲ್ಲಿ ಚಿತ್ರದಲ್ಲಿ ಜೋಡಿಯಾಗಿ ಅಭಿನಯಿಸಿ ಅಭಿಮಾನಿಗಳ ಮನ ಗೆದ್ದರು. ನಂತರ 2008ರಲ್ಲಿ ಕುರುವಿ ಚಿತ್ರದಲ್ಲೂ ಕಾಣಿಸಿಕೊಂಡರು. 15 ವರ್ಷಗಳ ನಂತರ, ಅವರು 2023ರ ಬ್ಲಾಕ್ಬಸ್ಟರ್ ಚಿತ್ರ ಲಿಯೋನಲ್ಲಿ ಮತ್ತೆ ಒಟ್ಟಿಗೆ ಅಭಿನಯಿಸಿದ್ದು, ಅವರ ಆಫ್-ಸ್ಕ್ರೀನ್ ಸಂಬಂಧದ ಬಗ್ಗೆ ಮತ್ತೊಮ್ಮೆ ಊಹಾಪೋಹಗಳಿಗೆ ಕಾರಣವಾಯಿತು.
ತ್ರಿಷಾ ಕೃಷ್ಣನ್ ಅವರು 2015ರಲ್ಲಿ ಉದ್ಯಮಿ ವರುಣ್ ಮನಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಆದರೆ ನಂತರ ಅದು ರದ್ದುಗೊಂಡಿತು. 2010ರ ದಶಕದ ಅಂತ್ಯದ ವೇಳೆಗೆ ಅವರು ನಟ ರಾಣಾ ದಗ್ಗುಬಾಟಿ ಅವರೊಂದಿಗೆ ಸಂಬಂಧದಲ್ಲಿದ್ದರು ಎಂಬ ವದಂತಿಯಿದೆ. ಸುಮಾರು ಒಂದು ದಶಕದ ಹಿಂದೆ ಆರಂಭವಾದ ಆ ಸ್ನೇಹವು ಬಳಿಕ ಅಂತ್ಯಗೊಂಡಿತ್ತು.
Advertisement